ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕುಟುಂಬಸ್ಥರ ವಿರೋಧದ ಮಧ್ಯೆಯೂ ಪ್ರೀತಿಸಿ ಮದುವೆ
ಕನ್ನಡಪ್ರಭ ವಾರ್ತೆ ಹಿರೇಕೆರೂರುವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಶಿಲ್ಪಾ (ಅನುಷಾ) ಪ್ರದೀಪ ಸ್ವಾಮಿ ಹಿರೇಮಠ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಹಿರೇಕೆರೂರು ಪಟ್ಟಣದ ಶಿವಯೋಗೆಪ್ಪ ಕಾಯಕದ ಅವರ ಮಗಳಾದ ಶಿಲ್ಪಾ 2021ರಲ್ಲಿ ಹಾದ್ರಿಹಳ್ಳಿ ಗ್ರಾಮದ ಪ್ರದೀಪ ಸ್ವಾಮಿ ಹಿರೇಮಠ ಅವರನ್ನು ಪ್ರೀತಿಸಿ, ಕುಟುಂಬಸ್ಥರ ವಿರೋಧದ ಮಧ್ಯೆಯೂ ಮದುವೆಯಾಗಿದ್ದಳು.
ಆರಂಭದಲ್ಲಿ ಮುನಿಸಿಕೊಂಡಿದ್ದ ತವರು ಮನೆಯವರು ನಂತರ ಮಗಳೊಂದಿಗೆ ಚೆನ್ನಾಗಿದ್ದರು. ಕೆಲದಿನ ಕಳೆದ ನಂತರ ಪತಿ ಪ್ರದೀಪಸ್ವಾಮಿ ಪದೇ ಪದೇ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೊನೆಗೆ ಶಿಲ್ಪಾಳ ತವರು ಮನೆಯವರು 7 ತೊಲೆ ಬಂಗಾರ ಮತ್ತು ಹಣ ನೀಡಿದ್ದರು.ಮದ್ಯ ವ್ಯಸನಿಯಾಗಿದ್ದ ಪ್ರದೀಪ ಸ್ವಾಮಿ, ಮತ್ತೆ ಹೆಚ್ಚಿನ ಹಣ ತವರು ಮನೆಯಿಂದ ತರುವಂತೆ ಪತ್ನಿಗೆ ನಿತ್ಯವೂ ದೈಹಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ನೀನು ದುಡಿದು ಹಣ ತರುವಂತೆ ಹೇಳುತ್ತಿದ್ದ. ಶಿಲ್ಪಾ ಖಾಸಗಿ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿ ಸಂಬಳವನ್ನು ಪತಿಗೆ ನೀಡುತ್ತಿದ್ದಳು.
ಇಷ್ಟಕ್ಕೂ ಸುಮ್ಮನಾಗದ ಪ್ರದೀಪಸ್ವಾಮಿ, ನನಗೆ ಮತ್ತಷ್ಟು ಹಣ ಬೇಕು ಎಂದು ತೀವ್ರ ಹಿಂಸೆ ನೀಡಲಾರಂಭಿಸಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಶಿಲ್ಪಾ, ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಂದೆ ಶಿವಯೋಗೆಪ್ಪ ಕಾಯಕದ ಅವರು ಮಗಳ ಪತಿ ಪ್ರದೀಪ ಸ್ವಾಮಿ ಹಾಗೂ ಅತ್ತೆ ಲತಾ ಹಿರೇಮಠ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.