ಯಲಬುರ್ಗಾ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಡಾ.ಜಗಜೀವನರಾಮ್ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ಮನವಿ ಮಾಡಿದರು.
ಪಟ್ಟಣದ ಕಂದಾಯ ಭವನದಲ್ಲಿ ತಾಲೂಕಾಡಳಿತದಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗನಜೀವನರಾಮ್ ಜಯಂತಿಯ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕಾಡಳಿತದಿಂದ ಏ. ೫ರಂದು ಬಾಬು ಜಗಜೀವನರಾಮ್ ಜಯಂತಿ ಮತ್ತು ಏ. ೧೪ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುವುದು.ಇಬ್ಬರು ಮಹನೀಯರ ಜಯಂತಿ ಪ್ರತ್ಯೇಕವಾಗಿ ಆಚರಿಸಲಾಗುವುದು.ಪಟ್ಟಣದ ಬಯಲು ರಂಗಮಂದಿರದಲ್ಲಿ ಜಯಂತಿ ಕಾರ್ಯಕ್ರಮ ಜರುಗಲಿದೆ.ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಡ್ಡಾಯವಾಗಿ ಎಲ್ಲ ಇಲಾಖೆಯಲ್ಲಿ ಜಯಂತಿ ಕಾರ್ಯಕ್ರಮ ಆಚರಣೆ ಬಳಿಕ ವೇದಿಕೆ ಸಮಾರಂಭಕ್ಕೆ ಅಧಿಕಾರಿಗಳು ಪಾಲ್ಗೊಳ್ಳಬೇಕು.ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಗೆ ಸನ್ಮಾನ, ಸ್ಥಳೀಯ ಪಪಂನಿಂದ ಡಾ. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ವಿವಿಧ ವೃತ್ತದ ಮೂಲಕ ಅದ್ಧೂರಿಯಾಗಿ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಮುಖಂಡರು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಮನವಿ: ಇಲ್ಲಿನ ಬೇವೂರು ರಸ್ತೆ ಪಕ್ಕದಲ್ಲಿರುವ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಮಾಡಲು ದಲಿತರಿಗೆ ಉಚಿತ ಅವಕಾಶ ನೀಡಬೇಕು.ಇಲ್ಲವೇ ಪಟ್ಟಣದ ೧೪ನೇ ವಾರ್ಡ್ನಲ್ಲಿ ಕಳೆದ ಹಲವಾರು ವರ್ಷಗಳಿಂದ ಡಾ. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದರು. ಇದಕ್ಕೆ ಪಪಂ ಮುಖ್ಯಾಧಿಕಾರಿ ನಾಗೇಶ ಪ್ರತಿಕ್ರಿಯಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.ತಾಪಂ ಇಒ ನೀಲಗಂಗಾ ಬಬಲಾದ ಮಾತನಾಡಿ, ದೇಶಕ್ಕೆ ತಮ್ಮದೆಯಾದ ಕೊಡುಗೆ ನೀಡಿದ ಮಹನೀಯರ ಜಯಂತಿ ವಿಜೃಂಭಣೆಯಿಂದ ಆಚರಿಸೋಣ. ಇದಕ್ಕೆ ಅಧಿಕಾರಿಗಳು,ಸಮಾಜದ ಮುಖಂಡರ ಸಹಕಾರ ಅವಶ್ಯವಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ ಮಾತನಾಡಿದರು.
ಈ ಸಂದರ್ಭ ಪಪಂ ಮುಖ್ಯಾಧಿಕಾರಿ ನಾಗೇಶ, ಪಿಎಸ್ಐ ವಿಜಯ ಪ್ರತಾಪ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ಬೆಟದೇಶ ಮಾಳೇಕೊಪ್ಪ, ಬಿ.ಮಲ್ಲಿಕಾರ್ಜುನ, ಬಸವರಾಜ ಗೋಗೇರಿ, ಹಸೇನ್ ಎಂ, ನಾಜೀಯಾ, ಸಂಜಯ ಚಿತ್ರಗಾರ, ಸಣ್ಣಕುಂಟೆಪ್ಪ ಆಲೂರು, ಪಿ.ಬಿ.ಕುಂಬಾರ, ಸಿದ್ದಪ್ಪ ಕಟ್ಟಿಮನಿ, ಅಂದಪ್ಪ ಹಾಳಕೇರಿ, ಛತ್ರಪ್ಪ ಛಲವಾದಿ, ವಸಂತಕುಮಾರ ಭಾವಿಮನಿ, ಶರಣಮ್ಮ ಪೂಜಾರ, ಡಿ.ಕೆ. ಪರಶುರಾಮ, ಶಶಿಧರ ಹೊಸಮನಿ, ಶಂಕರ್ ಜಕ್ಕಲಿ, ಪರಶುರಾಮ ಸಂಗನಾಳ, ವಿಜಯ ಜಕ್ಕಲಿ, ಕನಕೇಶ ಛಲವಾದಿ, ಸುರೇಶ ನಡುಲಮನಿ, ರಮೇಶ ಬಣಕಾರ, ಗದ್ದೆಪ್ಪ ಕುಡಗುಂಟಿ, ಯಮನೂರು, ಅಜ್ಮೀರ ಹಿರೇಮನಿ, ಪಾಷಾ ಗುಳೇದಗುಡ್ಡ ಹಾಗೂ ಅಧಿಕಾರಿಗಳು ಇದ್ದರು.