ಶಾಸಕ ಜಿಟಿಡಿ ಹೇಳಿಕೆ ಖಂಡಿಸಿ ಕರ್ನಾಟಕ ಭೀಮ್ ಸೇನೆ ಪ್ರತಿಭಟನೆ

| Published : Aug 21 2025, 01:00 AM IST

ಸಾರಾಂಶ

ದುರಹಂಕಾರದ ನಡವಳಿಕೆ ಸರಿಯಲ್ಲ ಎಂದು ಅವರು ಆಕ್ರೋಶ

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ಅವಕಾಶ ನೀಡಿದರೆ ಸಹಕಾರ ಸಂಘಗಳ ಬಾಗಿಲು ಮುಚ್ಚಬೇಕಾಗುತ್ತದೆಂಬ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆ ಖಂಡಿಸಿ ಕರ್ನಾಟಕ ಭೀಮ್ ಸೇನೆಯವರು ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟಿಸಿದರು.ಅಧಿವೇಶನದಲ್ಲಿ ಸಹಕಾರ ಸಂಘಗಳಲ್ಲಿ ದಲಿತರಿಗೆ ಮತ್ತು ಮಹಿಳೆಯರಿಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮತ್ತು ರೋಸ್ಟರ್ ಪದ್ಧತಿಯಲ್ಲಿ ಅಧಿಕಾರ ಹಂಚಿಕೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಚಿವ ಎಚ್.ಕೆ. ಪಾಟೀಲ್ ಮಂಡಿಸಿದ್ದರು. ಈ ವೇಳೆ ಶಾಸಕ ಜಿ.ಟಿ. ದೇವೇಗೌಡ ಅವರು ವಿರೋಧ ವ್ಯಕ್ತಪಡಿಸಿ ದಲಿತರನ್ನು ಅವಮಾನಿಸಿದ್ದಾರೆ. ಈ ದುರಹಂಕಾರದ ನಡವಳಿಕೆ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಜಿ.ಟಿ. ದೇವೇಗೌಡರ ಹೇಳಿಕೆ ಅವರ ನಡವಳಿಕೆಯನ್ನು ಪುಷ್ಟೀಕರಿಸುವಂತಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದರಿಂದ ಇವರ ಸದಸ್ಯತ್ವವನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ. ಮಂಜುನಾಥ್, ಮುಖಂಡರಾದ ನಾಗಣ್ಣ, ಶರತ್, ಮೋಹನ್, ಜ್ಯೋತಿ, ವಿಜಯ್, ಕಿರಣ್, ಭೀಮಣ್ಣ ಮೊದಲಾದವರು ಇದ್ದರು.