ಡಾ. ಚಂದ್ರಮೌಳಿ ನಾಯ್ಕರ ಅವರು ಕನ್ನಡ ಸೇರಿದಂತೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದು, ಅಲ್ಲದೇ ಭಾರತ ಸಂವಿಧಾನವನ್ನು ಇಂಗ್ಲಿಷ್ನಿಂದ ಸಂಸ್ಕೃತಕ್ಕೆ ಅನುವಾದಿಸಿದ ಅಪ್ರತಿಮ ಸಾಹಿತಿಯಾಗಿದ್ದಾರೆ
ಶಿವಾನುಭವ, ಅಭಿನಂದನಾ ಸಮಾರಂಭದಲ್ಲಿ ಪ್ರೊ. ಎಸ್.ಎಸ್. ಪೂಜಾರ
ಕನ್ನಡಪ್ರಭ ವಾರ್ತೆ ನರಗುಂದಡಾ. ಚಂದ್ರಮೌಳಿ ನಾಯ್ಕರ ಅವರು ಕನ್ನಡ ಸೇರಿದಂತೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಸೇವೆಯಲ್ಲಿ ಅಪಾರ ಕೊಡುಗೆ ನೀಡಿದ್ದು, ಅಲ್ಲದೇ ಭಾರತ ಸಂವಿಧಾನವನ್ನು ಇಂಗ್ಲಿಷ್ನಿಂದ ಸಂಸ್ಕೃತಕ್ಕೆ ಅನುವಾದಿಸಿದ ಅಪ್ರತಿಮ ಸಾಹಿತಿಯಾಗಿದ್ದಾರೆ ಎಂದು ಪ್ರೊ. ಎಸ್.ಎಸ್. ಪೂಜಾರ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ 386ನೇ ಮಾಸಿಕ ಶಿವಾನುಭವ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸುಮಾರು ಐವತ್ತಕ್ಕೂ ಹೆಚ್ಚು ಸಂಸ್ಕೃತ ಮತ್ತು ಕನ್ನಡ ಪುಸ್ತಕಗಳು ಸೇರಿದಂತೆ ಸಂಸ್ಕೃತ-ಕನ್ನಡ ಶಬ್ದಾರ್ಥ ಕೋಶ ಹೀಗೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಕೀರ್ತಿ ನಾಯ್ಕರ ಅವರಿಗೆ ಸಲ್ಲುತ್ತದೆ ಎಂದರು.ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಸಂಸ್ಕೃತಿ ಪರಂಪರೆಯನ್ನು ಸಾಗರದಾಚೆ ಪಸರಿಸಿದ ಇವರು ಶೈಕ್ಷಣಿಕ ಹಾಗೂ ಸಾಹಿತ್ಯಕ ಸೇವೆಗೆ ನಾಡಿನ ಹಲವಾರು ಸಂಘ- ಸಂಸ್ಥೆಗಳಿಂದ ಪ್ರಶಂಸಿತರಾಗಿದ್ದಾರೆ. ಶ್ರೀಯುತರು ಬಂಡಾಯದ ನಾಡು ನರಗುಂದದವರೆಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಅಮೆರಿಕದ ವಿಜ್ಞಾನ, ಯೋಗ ಮತ್ತು ಅನುಸಂಧಾನ ವಿಶ್ವವಿದ್ಯಾಲಯದ ಬೆಂಗಳೂರು ಶಾಖೆಯ ಗೌರವ ಕುಲಪತಿಗಳಾದ ಹಿನ್ನೆಲೆ ಡಾ. ಚಂದ್ರಮೌಳಿ ನಾಯ್ಕರ ಅವರನ್ನು ಶ್ರೀಮಠದಿಂದ ಅಭಿನಂದಿಸಲಾಯಿತು.ವಿಶ್ರಾಂತ ಪ್ರಾಚಾರ್ಯ ಅರ್ಜುನ ಗೊಳಸಂಗಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಜಿ. ಮಣ್ಣೂರಮಠ, ಪ್ರಹ್ಲಾದಗೌಡ ಪಾಟೀಲ, ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ, ಮಂಗಳಾ ಪಾಟೀಲ, ಡಾ. ಸಿ.ಕೆ. ರಾಚನಗೌಡ್ರ, ಪ್ರಾಧ್ಯಾಪಕರಾದ ಡಾ. ಜಗದೀಶ ತಳವಾರ, ಡಾ. ರಾಮು ಎಂ.ಎಸ್. ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಕೆ. ಐನಾಪೂರ ನಿರೂಪಿಸಿ, ವಂದಿಸಿದರು.