ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆಹಳಕಟ್ಟಿ ವಚನ ಸಾಹಿತ್ಯವನ್ನು ಪುರಾತನ ಮಠಗಳ ಅಂತರಾಳದಿಂದ ಹೊರತೆಗೆದು, ಇಂದಿನ ಜನಸಾಮಾನ್ಯರ ಮನಸ್ಸಿಗೆ ತಲುಪಿಸಿದ ಶ್ರೇಷ್ಠ ಸಂಶೋಧಕ, ಲೇಖಕ ಹಾಗೂ ಸಮಾಜಸೇವಕ ಎಂದು ವಿಜಯಪುರದ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ನುಡಿದರು.ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಹಸ್ತಪ್ರತಿಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ದತ್ತಿನಿಧಿ ಅಂಗವಾಗಿ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ-೨೪ ರ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.ಡಾ. ಫ.ಗು. ಹಳಕಟ್ಟಿ ಕಾನೂನು ಪದವಿಯನ್ನು ಪಡೆದು ಆಕಸ್ಮಿಕವಾಗಿ ಸಿಕ್ಕ ವಚನ ಹಸ್ತಪ್ರತಿಗಳ ಕಟ್ಟನ್ನು ನೋಡಿ ಅವರಿಗೆ ಆಸಕ್ತಿ ಮೂಡಿತು. ವಚನ ಸಾಹಿತ್ಯ ಸಂಗ್ರಹಕ್ಕೆ ಅರವತ್ತು ವರ್ಷಗಳ ನಿರಂತರ ತಮ್ಮ ಬದುಕು ಮುಡಿಪಾಗಿಟ್ಟು, ಇಪ್ಪತ್ತು ವರ್ಷಗಳ ಕಾಲ ಹಸ್ತಪ್ರತಿಗಳ ಸಂಗ್ರಹದಲ್ಲಿ ತೊಡಗಿದ್ದರು. ಇವುಗಳು ಜನರ ಮನಸ್ಸಿಗೆ ತಲುಪಬೇಕು ಎಂದು ಯೋಚಿಸಿ, ಹಸ್ತಪ್ರತಿಗಳನ್ನು ಮುದ್ರಣ ರೂಪದಲ್ಲಿ ತರಬೇಕೆಂದು ವಚನಶಾಸ್ತ್ರ ಸಾರ ಭಾಗ ೧ ಅದನ್ನು ಮುದ್ರಣಕ್ಕೆಂದು ಕಳುಹಿಸಿದರು. ಅದು ಆಗ ಧರ್ಮದ ಆಧಾರವಾಗಿ ತಿರಸ್ಕರಿಸಿದರು. ನಂತರ ಬೆಳಗಾವಿಯಲ್ಲಿ ಮುದ್ರಣಗೊಂಡಿತು. ತಮ್ಮ ಮನೆಯನ್ನು ಮಾರಿ ಮುದ್ರಣ ಯಂತ್ರವನ್ನು ಸ್ವಂತದಾಗಿ ಖರೀದಿಸಿದ್ದರು ಎಂದು ತಿಳಿಸಿದರು.ವಿಜಯನಗರ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಎಸ್. ಶಿವಾನಂದ ಮಾತನಾಡಿ, ಹಳಕಟ್ಟಿಯವರು ವಚನ ಸಾಹಿತ್ಯಕ್ಕೆ ತಮ್ಮ ಸರ್ವಸ್ವ ತ್ಯಾಗ ಮಾಡಿದ್ದಾರೆ. ತಮ್ಮ ಕುಟುಂಬವನ್ನು ಮರೆತು ವಚನ ಸಾಹಿತ್ಯದ ಉಳಿವಿಗಾಗಿ ಶ್ರಮಪಟ್ಟ ದುಡಿದರು. ಇನ್ನು ಹಸ್ತಪ್ರತಿಗಳ ಸಂಗ್ರಹ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ ಮತ್ತು ಬದ್ಧತೆ ಇದ್ದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರು ಹಾಗೂ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ನಿರ್ದೇಶಕ ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಾನಾ ನಿಕಾಯಗಳ ಡೀನರು, ನಾನಾ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.