ರೋಣ: ಬೀದರನ ಭಾಲ್ಕಿ ಮತ್ತು ಭಾತಂಬ್ರಾದ ನೂತನ ಪೀಠಾಧಿಪತಿ ಡಾ. ಗುರು ಬಸವ ಸ್ವಾಮಿಗಳ ಪುರಪ್ರವೇಶ ಸೋಮವಾರ ಸಾಯಂಕಾಲ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಅದ್ಧೂರಿಯಾಗಿ ಜರುಗಿತು.ಡಾ.ಗುರುಬಸವ ಸ್ವಾಮೀಜಿ ತಮ್ಮ ಹುಟ್ಟೂರಾದ ಕೃಷಾಪುರಕ್ಕೆ ಆಗಮಿಸುತ್ತಿದಂತೆ ಭಕ್ತರು ಜಯಘೋಷಣೆಗಳೊಂದಿಗೆ ಸ್ವಾಗತಿಸಿದರು. ಕೃಷ್ಣಾಪುರ ಗ್ರಾಮ ಪ್ರವೇಶ ದ್ವಾರದಿಂದ ಅದ್ಧೂರಿಯಾಗಿ ಸ್ವಾಗತಿಸಿದ ಭಕ್ತರು ರಸ್ತೆಯೂದ್ದಕ್ಕು ರಂಗವಲ್ಲಿ, ತಳಿರು ತೋರಣಗಳಿಂದ ಸಿಂಗರಿಸಿದ್ದರು. ಮೆರವಣಿಗೆಯಲ್ಲಿ 101 ಮಹಿಳೆಯರಿಂದ ಪೂರ್ಣಕುಂಭ, ಡೊಳ್ಳು, ಭಜನೆ ತಂಡಗಳು, ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿದ್ದವು. ಕಲಾ ತಂಡಗಳ ಕುಣಿತ, ನೃತ್ಯ, ಕೋಲಾಟ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದವು. ಕಾಲ್ನಡಿಗೆಯ ಮೂಲಕ ಸಾಗಿದ ಶ್ರಿಗಳು ಧರ್ಮ‌ಸಭೆ ಮಂಟಪದವರೆಗೂ ತೆರಳಿದರು. ರಸ್ತೆಯೂದ್ದಕ್ಕೂ ಹಾಕಲಾದ ಪುಷ್ಪರಾಶಿಯ ಮೇಲೆ ಶ್ರೀಗಳು ಕರೆತರಲಾಯಿತು. ಬಳಿಕ ನಡೆದ ಧರ್ಮ ಸಭೆಯಲ್ಲಿ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಬೌದ್ಧಿಕ ವಿಕಾಸ ಹೊಂದಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಬದುಕಿನಲ್ಲಿ ಸಾಧನೆ ಕಾಣಬೇಕಾದರೆ ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆ ಇದೆ. ವ್ಯಕ್ತಿಯೊಳಗಿನ ಶಕ್ತಿಯನ್ನು ಹೊರತಂದು ಮಹಾನ್ ವ್ಯಕ್ತಿಯಾಗಿ ಮಾಡುವ ಮಾರ್ಗದರ್ಶಕರ ಹಾದಿಯಲ್ಲಿ ನಡೆದರೆ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ.

ದಾನ, ಧರ್ಮಾಧಿ ಕಾರ್ಯಗಳಿಂದ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು.‌ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗುವ ಮೂಲಕ ಜೀವನವನ್ನು ಪರಿಪೂರ್ಣವಾಗಿಸಿಕೊಳ್ಳಬೇಕು. ಸಮಾಜದಲ್ಲಿ ಸಂಸ್ಕೃತಿ ನಾಶವಾಗುತ್ತಿರುವ ಭೀತಿ ಎದುರಾಗಿದೆ. ವಿದೇಶಗಳಲ್ಲಿ ಓದಿ ಕೆಲಸ ಮಾಡುತ್ತಿರುವ ಮಕ್ಕಳು ಭಾರತೀಯ ದೇಶಿ ಸಂಸ್ಕೃತಿಯನ್ನು ಮರೆಯುವಂತೆ ನಡೆದುಕೊಳ್ಳುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಈ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಅವರೆಲ್ಲ ನಮ್ಮ ಸಂಸ್ಕೃತಿಗೆ ಸೇರಿಸಿಕೊಳ್ಳದಿದ್ದರೆ, ನಾವು ಕಳೆದು ಕೊಳ್ಳಬೇಕಾಗುತ್ತದೆ ಎಂದರು.

ಭಾತಂಭ್ರಾ ಶಿವಯೋಗಶ್ವರ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ದೇವರು, ಅಕ್ಕಲಕೋಟೆಯ ಬಸವಲಿಂಗ ‌ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ದೇವರು, ವೀಶ್ವನಾಥ ದೇವರು, ಬೇನಹಾಳ ಸದಾಶಿವ ಮಹಾಂತ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು, ಕೆಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಮಿಥುನ‌ ಪಾಟೀಲ, ಶಿವಣ್ಣ ಪಲ್ಲೇದ, ಬಸವರಾಜ ಬಿಂಗಿ ಅನೇಕ ಗಣ್ಯರು ಉಪಸ್ಥಿತರಿದ್ದರು.