ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಜಾತಿ ಶ್ರೇಷ್ಠತೆ ತೊಲಗಿಸಿದ ತತ್ವಜ್ಞಾನಿ ಬ್ರಹ್ಮಶ್ರೀ ನಾರಾಯಣಗುರು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಜಾತಿಯ ಶ್ರೇಷ್ಠತೆ ಕಾರಣಕ್ಕೆ ತಾರತಮ್ಯ ಮಾಡುತ್ತಿದ್ದವರ ವಿರುದ್ಧ ಹೋರಾಟ ನಡೆಸಿ, ಪುರೋಹಿತಶಾಹಿ ವ್ಯವಸ್ಥೆಯನ್ನು ಖಂಡಿಸಿದ ಶ್ರೇಷ್ಠ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಹೇಳಿದರು.ತಮ್ಮ ಸೈದ್ಧಾಂತಿಕ ನಿಲುವುಗಳ ಮೂಲಕ ಅನಿಷ್ಠ ಪದ್ಧತಿಗಳಿಂದ ಕೂಡಿದ್ದ ಕಾಲದಲ್ಲಿ ಸಮಾಜ ಸುಧಾರಣೆಗೆ ಹೋರಾಡಿದ ನಾರಾಯಣ ಗುರುಗಳು, ಜಾತಿಯ ಕಾರಣಕ್ಕೆ ನಿರ್ಲ್ಯಕ್ಷತೆ ಹಾಗೂ ನಿರ್ದಾಕ್ಷಣ್ಯಕ್ಕೆ ಒಳಗಾದವರ ಪರವಾಗಿ ದನಿ ಎತ್ತಿ ಶ್ರೇಷ್ಠ ಚಿಂತಕರಾಗಿದ್ದರು ಎಂದರು.ಅಂದಿನ ಕಾಲದಲ್ಲಿ ಹಿಂದೂ ಧರ್ಮದಲ್ಲಿನ ಮನುವಾದವು ತಳಸ್ತರದ ಜನರನ್ನು ಸೇವೆ ಮಾಡಲೆಂದೇ ಪರಿಗಣಿಸಲಾಗಿತ್ತು. ನಾರಾಯಣ ಗುರುಗಳ ಈ ಅನಿಷ್ಟತೆಗಳ ವಿರುದ್ಧ ಪ್ರತಿಭಟಿಸಿದರು. ಅವರ ಹೋರಾಟದ ಪರಿಣಾಮ ಎಲ್ಲರೂ ಪ್ರಯೋಜನೆ ಪಡೆದಿದ್ದಾರೆ ಎಂದು ಅವರು ತಿಳಿಸಿದರು.ಶಿಕ್ಷಣ ನಮ್ಮ ಪ್ರಗತಿಗೆ ದಾರಿ ಎಂದ ಅವರು, ಶಾಲಾ ಹಾಗೂ ಕಾಲೇಜುಗಳನ್ನು ತೆರೆದರು. ಶಿಕ್ಷಣದಿಂದ ನಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಶ್ರಮಿಸಿದರು. ಪ್ರಸ್ತುತ ಕೇರಳ ರಾಜ್ಯವು ಶಿಕ್ಷಣದಲ್ಲಿ ಶೇ.100 ರಷ್ಟು ಸಾಧನೆ ಮಾಡಲು ನಾರಾಯಣ ಗುರು ಅವರು ಕಾರಣರಾಗಿದ್ದಾರೆ. ಶೋಷಿತರು ಶಿಕ್ಷಣ ಪಡೆಯುವ ಮೂಲಕ ಸಮಾನತೆ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ ಎಂದರು.ಸಮುದಾಯದ ಮುಖಂಡರು ನೀಡಿರುವ ಬೇಡಿಕೆಯನ್ನು ಈಡೇರಿಸಲಾವುಗುದು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೆಂದರೆ ಅದು ಬಡವರ, ಹಿಂದುಳಿದವರ, ಶೋಷಿತರ, ರೈತರ, ಹಾಗೂ ಕಾರ್ಮಿಕರ ಮತ್ತು ಅಲ್ಪಸಂಖ್ಯಾತರ ಪರವಾದ ಸರ್ಕಾರ ಎಂದು ಅವರು ಹೇಳಿದರು. ಪ್ರತಿಭಾ ಪುರಸ್ಕಾರಇದೇ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಮು ಮುಖ್ಯ ಭಾಷಣ ಮಾಡಿದರು.ಇದಕ್ಕೂ ಮುನ್ನ ಜಯಂತಿ ಅಂಗವಾಗಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಕಲಾಮಂದಿರವರೆಗೆ ನಾರಾಯಣ ಗುರುಗಳ ಭಾವಚಿತ್ರವನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು.ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಮೊಗ್ಗದ ನಾರಾಯಣಗುರು ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್,ಆರ್ಯ ಈಡಿಗ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾಧ್ಯಕ್ಷ ಎಂ.ಕೆ. ಪೋತರಾಜು, ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ, ಪದಾಧಿಕಾರಿಗಳಾದ ರಾಜಶೇಖರ ಕದಂಬ, ಕೆ.ಎಸ್. ಕೃಷ್ಣಮೂರ್ತಿ, ವಿ. ಜಯಣ್ಣ, ಟಿ.ಎಸ್. ಗೋಪಾಲಸ್ವಾಮಿ, ಎಸ್.ಟಿ. ರಾಜು, ಕೆ.ವಿ. ಶ್ರೀಕಾಂತ್, ಶ್ರೀನಿವಾಸ್ಮೊದಲಾದವರು ಇದ್ದರು.----ಕೋಟ್...ಶಿಕ್ಷಣದ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆದು ನಾವು ಸಮಾನತೆಯ ಜೀವನ ನಡೆಸಿ ನಮ್ಮ ಹಕ್ಕುಗಳನ್ನು ಪಡೆಯಲು ನೆರವಾದ ನಾರಾಯಣ ಗುರುಗಳು ಪ್ರೇರಣಾ ಶಕ್ತಿಯಾಗಬೇಕೆ ಹೊರತು ಪೂಜಾ ಶಕ್ತಿಯಾಗಬಾರದು. ತುಳಿತಕ್ಕೊಳಗಾದ ಸಮುದಾಯಗಳು ಸಂಘಟನಾತ್ಮಕ ಹೋರಾಟಕ್ಕೆ ಅಣಿಯಾಗಬೇಕು. ಜಾತಿ ಸಂಕೋಲೆಗಳಿಂದ ಬಿಡುಗಡೆಯಾಗಿ ಸಮಾನತೆ, ಸಮಾನ ಅವಕಾಶಗಳಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು.- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು----ಶೂದ್ರರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ನಾರಾಯಣ ಗುರುಗಳು ಪ್ರತ್ಯೇಕ ದೇವಸ್ಥಾನ ನಿರ್ಮಿಸಿದರು. ಅಸ್ಪೃಶ್ಯತೆಗೆ ಬೇಸತ್ತು ಕೆಲವರು ಅನ್ಯಧರ್ಮಗಳಿಗೆ ಮತಾಂತರವಾಗುತ್ತಿದ್ದ ಕಾಲಗಟ್ಟದಲ್ಲಿ ಹಿಂದೂ ಧರ್ಮದಲ್ಲಿ ಇದ್ದು, ಸ್ವಾಭಿಮಾನದಿಂದ ಬದುಕುವಂತೆ ಮಾಡಿದರು. - ಡಾ.ಡಿ. ತಿಮ್ಮಯ್ಯ, ವಿಧಾನಪರಿಷತ್ ಸದಸ್ಯರು