ಸಾರಾಂಶ
ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದೆ. ಅದನ್ನು ತಡೆ ಹಿಡಿಯಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಹೆಣ್ಣಿನ ರಕ್ಷಣೆಯನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೈಸೂರು
ಹೆಣ್ಣು ದೇಶದ ಪ್ರತಿಯೊಬ್ಬ ಪುರುಷನ ಕಣ್ಣು, ಹೆಣ್ಣನ್ನು ತಾಯಿಯಾಗಿ ಮಡದಿಯಾಗಿ ಅಕ್ಕನಾಗಿ ತಂಗಿಯಾಗಿ ನೋಡುತ್ತೇವೆ. ಪ್ರಸ್ತುತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ರಂಗದಲ್ಲೂ ಹೆಣ್ಣು ಮುಂಚೂಣಿಯಲ್ಲಿದ್ದಾಳೆ. ಪ್ರತಿಯೊಬ್ಬರೂ ಹೆಣ್ಣನ್ನು ಗೌರವಿಸಬೇಕು, ಪ್ರೀತಿಸಬೇಕು, ಉತ್ತಮ ಸ್ಥಾನ ನೀಡಬೇಕು ಎಂದು ರಾಮಕೃಷ್ಣ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕಿ ಡಾ.ಕೆ.ವಿ. ಲಕ್ಷ್ಮೀದೇವಿ ಕರೆ ನೀಡಿದರು.ಮೈಸೂರಿನ ಕುವೆಂಪುನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದೆ. ಅದನ್ನು ತಡೆ ಹಿಡಿಯಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಹೆಣ್ಣಿನ ರಕ್ಷಣೆಯನ್ನು ನಾವೆಲ್ಲರೂ ಮಾಡೋಣ ಎಂದು ತಿಳಿಸಿದರು.
ಐಇಟಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಪಿ. ಗೀತಾಂಜಲಿ ಮಾತನಾಡಿ, ಹೆಣ್ಣು ಮನೆ ಒಳಗೆ, ಹೊರಗೆ ಕಷ್ಟ ಪಟ್ಟು ದುಡಿಯುತ್ತಾಳೆ. ಸಮಾಜದಲ್ಲಿ ಹೆಣ್ಣಿಗೆ ಉತ್ತಮ ಸ್ಥಾನಮಾನವನ್ನು ನಾವು ನೀಡಬೇಕಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದಾಗಿದೆ. ಇವತ್ತು ಹೆಣ್ಣು ಇನ್ನಷ್ಟು ಸಬಲೀಕರಣಗೊಳ್ಳಬೇಕಾಗಿದೆ. ನಾವು ಉತ್ತಮ ಸಮಾಜ ನಿರ್ಮಾಣದಲ್ಲಿ ಹೆಣ್ಣಿನ ಶ್ರಮ ಅಪಾರವಾದದ್ದು, ನಾವೆಲ್ಲರೂ ಅವಳನ್ನ ಗೌರವಿಸೋಣ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಮಹದೇವಸ್ವಾಮಿ ಮಾತನಾಡಿ, ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿಯನ್ನು ಹೊಂದುತ್ತಿರುವುದು ಕಂಡು ಬರುತ್ತದೆ. ನಾವು ಇನ್ನೂ ಹೆಚ್ಚಿನ ಸ್ಥಾನಮಾನ ನೀಡಿದರೆ ಅವಳ ಸಬಲೀಕರಣಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಡಾ.ಟಿ. ರಮೇಶ್, ವಿದ್ಯಾರ್ಥಿ ಸಾಂಸ್ಕೃತಿಕ ಕಾರ್ಯದರ್ಶಿ ಗಗನ, ವಿದ್ಯಾರ್ಥಿ ಅಧ್ಯಕ್ಷ ಚಂದನ್ ಇದ್ದರು.