ಹಿರಿಯೂರು ನಗರದ ರೋಟರಿ ಸಭಾ ಭವನದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ವತಿಯಿಂದ ವರನಟ ಡಾ.ರಾಜ್ ಕುಮಾರ್ ಅವರ 97ನೇ ಹಾಗೂ ಪುನೀತ್ ರಾಜ್ ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ವರನಟ ಡಾ.ರಾಜ್ ಕುಮಾರ್, ಶಂಕರ ನಾಗ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕ ಕಲಾ ಶ್ರೀಮಂತಿಕೆಯ ಅಸ್ಮಿತೆಯಾಗಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಹೇಳಿದರು.

ನಗರದ ರೋಟರಿ ಸಭಾ ಭವನದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಕಲಾ ವೇದಿಕೆ ಮತ್ತಿತರ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ವರನಟ ಡಾ.ರಾಜ್ ಕುಮಾರ್ ಅವರ 97ನೇ ಹಾಗೂ ಪುನೀತ್ ರಾಜ್ ಕುಮಾರ್ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.

ಕಲಾವಿದರ ಬದುಕಿನ ಜೊತೆಗೆ ನಾಡಿನ ಭಾಷೆಯನ್ನು ಸಹ ಶ್ರೀಮಂತಗೊಳಿಸಿದ ಕೀರ್ತಿರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಕೌಟುಂಬಿಕ ಮತ್ತು ಮಾನವೀಯ ಚಿತ್ರಗಳ ಮೂಲಕ ಅವರು ಸಮಾಜಕ್ಕೆ ಮಾದರಿಯಾಗಿ ಉಳಿದುಕೊಂಡಿದ್ದಾರೆ. ನಾಡಿನ ಕವಿ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅಗತ್ಯವಾಗಿದೆ. ವ್ಯವಹಾರಿಕ ಬದುಕಿನಲ್ಲಿ ಕಲೆ, ಸಂಸ್ಕೃತಿ ಬೆಳೆಸುವ ಕಲಾವಿದರು ಸಾಧಕರಾಗಿ ಉಳಿಯುತ್ತಾರೆ ಎಂದರು.

ಕವಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಬರಹಗಾರನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ವರ್ತಮಾನದ ತಲ್ಲಣಗಳಿಗೆ ಗಟ್ಟಿ ಧ್ವನಿ ಆಗಬೇಕು. ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿರುವ ಬಿಕ್ಕಟ್ಟುಗಳ ಬಗ್ಗೆ ಕಳಕಳಿ ಇರಬೇಕು. ಪ್ರಜಾಪ್ರಭುತ್ವ ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡುವ ರಾಜಕಾರಣ ವಿರುದ್ಧ ಬರಹ ಬಲಗೊಳ್ಳಬೇಕು. ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಶಿಕ್ಷಣ ವ್ಯಾಪಾರೀಕರಣ ಕುರಿತು ಬೆಳಕು ಚೆಲ್ಲುವ ಸಾಹಿತ್ಯ ರಚನೆ ಆಗಬೇಕು. ಬಯಲು ಸೀಮೆಯ ಜನ ಜೀವನ ಮತ್ತು ಇಲ್ಲಿನ ಸಂಕಷ್ಟದ ಪರಿಸ್ಥಿತಿಗಳನ್ನು ದಾಖಲು ಮಾಡುವ ಒಳಗಣ್ಣಿನ ಚೈತನ್ಯ ಕವಿಗೆ ಇರಬೇಕಾಗಿದೆ ಎಂದರು.

ಕಲಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್.ಸಿ.ದಿವುಶಂಕರ್ ಮಾತನಾಡಿ, ಕಲಾ ಸಂಘಟಿತ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಪ್ರೋತ್ಸಾಹ ಸಿಗಬೇಕು. ಸುಮಾರು ಮೂರು ದಶಕಗಳಿಂದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಕಲಾ ವೇದಿಕೆಗೆ ನಿವೇಶನ ಮತ್ತು ಒಂದು ಕಟ್ಟಡ ಸೌಕರ್ಯ ಆಗಬೇಕು ಎಂದು ಮನವಿ ಮಾಡಿದರು.

ಕವಿಗೋಷ್ಠಿಯಲ್ಲಿ ಶೈಲಜಾ ಬಾಬು, ನಿರ್ಮಲ ಭಾರದ್ವಾಜ್, ರಶ್ಮಿ, ಉಷಾರಾಣಿ, ಬಿಜಿಕೆರೆ ಶ್ರೀರಾಮಲು, ಬಬ್ಬೂರು ತಿಪ್ಪೀರನಾಯಕ, ಇಂಗಳದಾಳ್ ತಿಮ್ಮಯ್ಯ, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಕ್ಲಾಸಿಕ್ ಚಂದ್ರಶೇಖರ್, ಹೊನ್ನೂರಾಲಿ, ಲೋಕೇಶ್, ಪಲ್ಲವಿ, ಪಂಡರಹಳ್ಳಿ ಶಿವರುದ್ರಪ್ಪ, ಸತೀಶ್ ಕುಮಾರ್ , ಭಾಗ್ಯಮ್ಮ, ರಮೇಶ್ ಮತ್ತಿತರರು ಕವನ ವಾಚನ ಮಾಡಿದರು.

ಈ ವೇಳೆ ಪರಶುರಾಮ ಗೊರಪ್ಪರ್, ಡಾ.ಮಂಜುಳಾ, ರೈತ ಮುಖಂಡ ಜಯಣ್ಣ, ಜೂನಿಯರ್ ರಾಜ್ ಕುಮಾರ್ ಯಲ್ಲೇಶ್, ರಂಗಸ್ವಾಮಿ,ಎಂ.ಬಿ. ಲಿಂಗಪ್ಪ, ಎಚ್. ಸಿದ್ದೇಶ್, ಶ್ರೀನಿವಾಸ್, ವಿನೋದ್ ಕುಮಾರ,ದಾನಪ್ಪ, ನಟರಾಜ್ ಮುಂತಾದವರು ಹಾಜರಿದ್ದರು.