ಗಜೇಂದ್ರಗಡ: ಮಲೇರಿಯಾ ರೋಗವು ಸೋಂಕಿತ ಪ್ಲಾಸ್ಮೊಡಿಯಂ ಪರಾವಲಂಬಿಗಳು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ ಎಂದು ಪತ್ತೆ ಹಚ್ಚುವ ಮೂಲಕ ಮಾನವ ಕುಲಕ್ಕೆ ಅವರ ಕೊಡುಗೆ ನೀಡಿದ್ದು ವಿಜ್ಞಾನಿ ಡಾ. ರೋನಾಲ್ಡ್ ರಾಸ್ ಎಂದು ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶರಣು ಗಾಣಿಗೇರ ಹೇಳಿದರು.

ಸಮೀಪದ ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಸ್ತ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಸೂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ವಿಶ್ವ ಸೊಳ್ಳೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಲೇರಿಯಾ ರೋಗವು ಕೆಟ್ಟ ಗಾಳಿಯಿಂದ ಬರುತ್ತದೆ ಎಂದು ಪ್ರಾಚೀನ ಕಾಲದಲ್ಲಿ ನಂಬಲಾಗಿತ್ತು. ೧೮೯೭ರಲ್ಲಿ ಬ್ರಿಟಿಷ್ ವಿಜ್ಞಾನಿ ಅನಾಫಿಲಿಸ್ ಹೆಣ್ಣು ಸೊಳ್ಳೆಗಳು ಪರಾವಲಂಬಿ ಗಳನ್ನು ಹರಡುವುದರ ಮೂಲಕ ಮಲೇರಿಯಾ ತರುತ್ತದೆ ಎಂದು ವೈದ್ಯ ಲೋಕದಲ್ಲಿ ಆವಿಷ್ಕಾರವಾದ ಮೇಲೆ ಮನುಕುಲದ ಮಾರಣಹೋಮವನ್ನು ತಡೆಗಟ್ಟಲಾಯಿತು. ವೈದ್ಯ ಲೋಕದ ಈ ಕೊಡುಗೆಯನ್ನು ಪರಿಗಣಿಸಿ ಡಾ. ರೋನಾಲ್ಡ್ ರಾಸ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಮಾತನಾಡಿ, ಸೊಳ್ಳೆಗಳಿಂದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗದಂತಹ ಕಾಯಿಲೆಗಳು ಹರಡುತ್ತಿವೆ. ಸೊಳ್ಳೆಗಳ ನಿಯಂತ್ರಣದ ಬಗ್ಗೆ ಸಮುದಾಯದ ಪ್ರತಿಯೊಬ್ಬರೂ ಪಾಲುದಾರರಾಗಿ ಸೊಳ್ಳೆಗಳನ್ನು ನಿಯಂತ್ರಿಸಬೇಕಿದೆ ಎಂದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ ತುಮುರಗುದ್ದಿ ಮಾತನಾಡಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಿವಕುಮಾರ ಕುಬಸದ, ಮಹೇಶ ಹಿರೇಮಠ, ರಾಜೇಶ ಪಾಟೀಲ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಹೇಮಾಕ್ಷಿ ತಳವಾರ, ದಿಲಶಾದ್ ಮುಲ್ಲಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಬಸನಗೌಡ ಪಾಟೀಲ, ಪರಮಾನಂದ ಹುನಗುಂದ, ರೇಷ್ಮಾ ಪವಾರ ಸೇರಿ ಆಶಾ ಕಾರ್ಯಕರ್ತೆಯರು ಇದ್ದರು.