ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದೇಶದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರೆತಲ್ಲಿ ಮಾತ್ರ ನಾಡು ಸುಭಿಕ್ಷವಾಗಲಿದೆ ಎಂದವರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಎಂದು ಯೋಧ ಚಲುವರಾಜು ಹೇಳಿದರು.ಮಾಕವಳ್ಳಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ 133ನೇ ಜಯಂತಿಯಲ್ಲಿ ಮಾತನಾಡಿ, ವಿಶ್ವವೇ ಮೆಚ್ಚುವ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಇದನ್ನು ತಿಳಿದು ಬದುಕುವುದನ್ನು ಕಲಿಯಬೇಕಿದೆ ಎಂದರು.
ತಮ್ಮ ಬದುಕಿನ ಕಾರ್ಪಣ್ಯದಲ್ಲಿ ಬಂದಂತಹ ಕಷ್ಟ ಸಂಕೋಲೆಗಳು ಯಾರಿಗೂ ಬಾರದಿರಲಿ ಎಂದು ತಮ್ಮ ಬದುಕನ್ನು ನಾಡಿಗೆ ಮೀಸಲಿಟ್ಟರು. ಹುಟ್ಟಿನಿಂದ ಸಾಯುವವರಿಗೆ ಹಲವು ಸಮಸ್ಯೆಗಳಿದ್ದು ಎಲ್ಲವನ್ನು ಕಾನೂನಾತ್ಮಕವಾಗಿ ದೂರ ಮಾಡಲು ಸಂವಿಧಾನವನ್ನು ನೀಡಿದರು ಎಂದರು.ಮಹಿಳಾ ಸಬಲೀಕರಣ, ಉದ್ಯೋಗ ಮೀಸಲಾತಿ, ಸರ್ವರಿಗೂ ಸಮಾನ ಶಿಕ್ಷಣ, ಎಲ್ಲ ಕ್ಷೇತ್ರದಲ್ಲಿಯೂ ಸ್ವಾತಂತ್ರ್ಯದ ಹಕ್ಕು ಸಿಗುವಂತೆ ಮಾಡಿದರು. ಇವರ ಜಯಂತಿ ನಿತ್ಯವೂ ವಿನೂತನವಾಗಿ ಎಲ್ಲರೂ ಆಚರಿಸುವಂತೆ ಆಗಬೇಕಿದೆ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗ್ರಾಮಸ್ಥರು ಸ್ಮರಿಸಿದರು. ಮುಖಂಡರಾದ ಸುಬ್ಬಯ್ಯ, ಜವರಯ್ಯ, ರಮೇಶ್, ಸುನೀಲ್, ಶ್ರೀನಿವಾಸ್, ಸಣ್ಣಯ್ಯ, ಚಲುವಯ್ಯ, ಮೋಹನ್, ಕಾಳಮ್ಮ, ಗಾಯತ್ರಮ್ಮ, ಸುನೀತಾ, ಕಮಲಮ್ಮ ಉಪಸ್ಥಿತರಿದ್ದರು.ಕಸಾಪ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಪಾಂಡವಪುರ:ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಭಾರತ ಗಣರಾಜ್ಯದ ಸಂಪೂರ್ಣ ಪರಿಕಲ್ಪನೆಯನ್ನು ನಿರ್ಮಿಸಲು ನೀಡಿದ ಕೊಡುಗೆ ಅಪಾರವಾಗಿದೆ. ದೇಶಕ್ಕೆ ನೀಡಿದ ಕೊಡುಗೆ ಮತ್ತು ಸೇವೆಯನ್ನು ಗೌರವಿಸಲು, ಅವರ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ ಎಂದರು.ಅಂಬೇಡ್ಕರ್ ಅವರಿಗೆ ಭಾರತೀಯ ಸಂವಿಧಾನದ ಪಿತಾಮಹ ಎಂಬ ಬಿರುದನ್ನು ತಂದುಕೊಟ್ಟಿದೆ. ಅವರು ಜಗತ್ತನ್ನು ತೊರೆದಿರಬಹುದು. ಆದರೆ, ಅವರ ಮಾತುಗಳು ಪ್ರಪಂಚದಾದ್ಯಂತದ ಜನರನ್ನು ಇನ್ನೂ ಪ್ರೇರೇಪಿಸುತ್ತಿವೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ ಎಂದು ಅಂಬೇಡ್ಕರ್ ಹೇಳಿದ್ದರು. ಅಂಬೇಡ್ಕರ್ ಅವರಂತಹ ಮಹಾನಾಯಕನನ್ನು ಪಡೆದ ಭಾರತೀಯರೇ ಪುಣ್ಯವಂತರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳು ಹಾಗೂ ಸಾಹಿತ್ಯ ಅಭಿಮಾನಿಗಳು ಹಾಜರಿದ್ದರು.