ಸಾರಾಂಶ
ಚುನಾವಣೆ ಎಂಬುದು ಪ್ರಜಾಪ್ರಭುತ್ವ ಹಬ್ಬ ಇದ್ದಂತೆ. ಅದರಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು.
ತಾಲೂಕು ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿಗೆ ಚಾಲನೆ ನೀಡಿದ ತಹಸೀಲ್ದಾರ್
ಕನ್ನಡಪ್ರಭ ವಾರ್ತೆ ಕನಕಗಿರಿಚುನಾವಣೆ ಎಂಬುದು ಪ್ರಜಾಪ್ರಭುತ್ವ ಹಬ್ಬ ಇದ್ದಂತೆ. ಅದರಲ್ಲಿ ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಮಂಗಳವಾರ ಪಟ್ಟಣದ ಕಲ್ಮಠದಿಂದ ವಾಲ್ಮೀಕಿ ವೃತ್ತದವರೆಗೆ ತಾಲೂಕು ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಸದೃಢ ದೇಶ ಕಟ್ಟಲು ಶೇ.100ರಷ್ಟು ಮತದಾನ ಆಗಬೇಕು. ಯಾರೊಬ್ಬರೂ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂದು ತಿಳಿಸಿದರು.ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್. ವೀರೇಂದ್ರಕುಮಾರ ಮಾತನಾಡಿ, ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾನ ಪವಿತ್ರವಾದದ್ದು, ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಕರೆ ನೀಡಿದರು.
ಚುನಾವಣಾ ರಾಯಭಾರಿ ಡಾ. ಶಿವಕುಮಾರ ಮಾಲಿಪಾಟೀಲ ಜಾಥಾದಲ್ಲಿ ಪಾಲ್ಗೊಂಡಿದ್ದರು.ನಾನಾ ಇಲಾಖೆಗಳ 250ಕ್ಕೂ ಹೆಚ್ಚು ಸಿಬ್ಬಂದಿ ವಾಕಾಥಾನ್ದಲ್ಲಿ ಭಾಗವಹಿಸಿ, ಮತದಾನದ ಕುರಿತು ಜಾಗೃತಿ ಮೂಡಿಸಿದರು. ಪಟ್ಟಣದ ಎದುರು ಹನುಮಪ್ಪ ದೇಗುಲದಿಂದ ಬಸ್ ನಿಲ್ದಾಣ ಹಾಗೂ ವಾಲ್ಮೀಕಿ ವೃತ್ತದವರೆಗೆ ನಡೆದ ವಾಕಾಥಾನ್ನಲ್ಲಿ ಮತದಾನ ಜಾಗೃತಿ ಗೀತೆಗಳು, ಘೋಷಣೆಗಳ ಮೂಲಕ ಅರಿವು ಮೂಡಿಸಲಾಯಿತು.ಈ ವೇಳೆ ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸಿಡಿಪಿಒ ವಿರೂಪಾಕ್ಷಿ, ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ್, ತಾಲೂಕು ಯೋಜನಾಧಿಕಾರಿ ರಾಜಶೇಖರ, ತಾಪಂ ಅಧಿಕಾರಿಗಳು, ಪಪಂ ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಹಾಗೂ ಸಿಡಿಪಿಒ, ಕಂದಾಯ ಇಲಾಖೆ ಸಿಬ್ಬಂದಿ, ನರೇಗಾ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಎನ್.ಆರ್.ಎಲ್.ಎಂ ಯೋಜನೆ ಸಿಬ್ಬಂದಿ ಇದ್ದರು.