ಸಾರಾಂಶ
ಸಿದ್ದಗಂಗಾ ಡಾ.ಶ್ರೀ ಶಿವಕುಮಾರ್ ಸ್ವಾಮೀಜಿಯವರ ೧೧೮ ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಇಂಚರ ಹೋಟೆಲ್ ಸಮೂಹದ ಮಾಲೀಕ ಸ್ಟೈಲ್ ಮಂಜು ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಿದ್ದಗಂಗಾ ಡಾ.ಶ್ರೀ ಶಿವಕುಮಾರ್ ಸ್ವಾಮೀಜಿಯವರ ೧೧೮ ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ಇಂಚರ ಹೋಟೆಲ್ ಸಮೂಹದ ಮಾಲೀಕ ಸ್ಟೈಲ್ ಮಂಜು ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ದಾಸೋಹದ ವ್ಯವಸ್ಥೆ ಮಾಡಿದ್ದರು.ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಹೋಟೆಲ್ನಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ನಂತರ ಬೆಳಿಗ್ಗೆಯಿಂದ ಸಂಜೆವರೆಗೆ ತಿಂಡಿ-ಊಟ ಹಾಗೂ ಪಾನಕ, ಮಜ್ಜಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಂಜು ಮಾತನಾಡಿ, ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಹುಟ್ಟುಹಬ್ಬದ ಅಂಗವಾಗಿ ಪ್ರತಿ ವರ್ಷವೂ ಉಚಿತವಾಗಿ ಊಟ, ತಿಂಡಿ ವ್ಯವಸ್ಥೆ ಮಾಡುತ್ತಿದ್ದು, ಅದರಂತೆ ಈ ಬಾರಿಯು ಬೆಳಗ್ಗೆ ೧೫೦೦ ಮಂದಿಗೆ ತಿಂಡಿ, ಮಧ್ಯಾಹ್ನ ೩೫೦೦ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇಡೀ ಪ್ರಪಂಚಕ್ಕೆ ದಾಸೋಹ ತತ್ವವನ್ನು ಸಾರಿ ತ್ರಿವಿಧ ದಾಸೋಹದಲ್ಲಿ ಎತ್ತರಕ್ಕೆ ಸಾಗಿ ಪ್ರಕಾಶಿಸಿ, ಆ ಬೆಳಕನ್ನು ಇಡೀ ನಾಡಿಗೆ ಹಂಚಿದ ದಿವ್ಯ ಬೆಳಕು ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಇಂಚರ ಗ್ರೂಪ್ ನ ಇಂಚರ, ಈಶ್ವರ್ ರಕ್ಷಿತ್, ನಾಗರತ್ಮಮ್ಮ, ಉಮಾ, ಪ್ರಕಾಶ್, ರಾಧಾಕೃಷ್ಣ ಹಾಗೂ ಸಿಬ್ಬಂದಿ ಇದ್ದರು.