ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ ಕಳೆದ ಆರೇಳು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ನೀರಿನ ಸಂಪರ್ಕ ಒದಗಿಸಿಕೊಡುವಂತೆ ಆಗ್ರಹಿಸಿ ಬಿಟ್ಟಗೌಡನಹಳ್ಳಿ ಗ್ರಾಮಸ್ಥರು ಬುಧವಾರ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಿಟ್ಟಗೌಡನಹಳ್ಳಿ ನಿವಾಸಿಗಳಾದ ಮೊಗಣ್ಣಗೌಡ ಮತ್ತು ಜ್ಯೋತಿ ಮಾಧ್ಯಮದೊಂದಿಗೆ ಮಾತನಾಡಿ, ಇದುವರೆವಿಗೂ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಇದ್ದು, ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಬೋರ್ವೆಲ್ ಮೂಲಕ ಕುಡಿಯುವ ನೀರಿನ ವ್ಯವಸ್ತೆ ಮಾಡಲಾಗುತ್ತಿತ್ತು. ಆದರೆ ಇದೀಗ ಎಲ್ಲಾ ಬೋರ್ ವೆಲ್ಗಳಲ್ಲಿಯೂ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಸಧ್ಯದಲ್ಲಿ ೪-೫ ದಿನಗಳಿಗೆ ಒಮ್ಮೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದು ಯಾವುದಕ್ಕೂ ಸಾಲದಾಗಿದೆ ಎಂದರು. ಕಳೆದ ೬-೭ ತಿಂಗಳಿಂನಿಂದಲಂತೂ ಹೇಳತೀರದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಲವಾರು ಬಾರಿ ಸಂಬಂಧಿಸಿದವರಿಗೆ ತಿಳಿಸಿದರೂ ಸಹ ಪ್ರಯೋಜನ ವಾಗಿರುವುದರಿಲ್ಲ. ಹಾಲಿ ನಮ್ಮ ಗ್ರಾಮಕ್ಕೆ ಅಮೃತ್ ಯೋಜನೆಯಡಿಯಲ್ಲಿ ಪೈಪು ಅಳವಡಿಸಿದ್ದು, ಇದರ ಮೂಲಕವಾದರೂ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸಿದರು. ತಾವುಗಳು ದಯಮಾಡಿ ಶೀಘ್ರವಾಗಿ ತಕ್ಷಣವೇ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿಕೊಟ್ಟು ನಮ್ಮ ಗ್ರಾಮದ ಜನತೆಗೆ ಕುಡಿಯುವ ನೀರಿನ ತೊಂದರೆಯನ್ನು ತಪ್ಪಿಸಬೇಕೆಂದು ವಿನಂತಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಗ್ರಾಮದ ಮುಖಂಡರಾದ ಮೊಗಣ್ಣಗೌಡ, ಲೋಕೇಶ್, ಸುಶೀಲಮ್ಮ, ಸುರೇಶ್, ಗೀತಾ, ಜ್ಯೋತಿ, ಮಾನಸ ಇತರರು ಇದ್ದರು.