ಸಾರಾಂಶ
ಕವಿತಾಳ ಸಮೀಪದ ಪಾಮನಕಲ್ಲೂರು ಗ್ರಾಮದ 1, 2ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಮಹಿಳೆಯರು ಮಕ್ಕಳು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕವಿತಾಳಕೋಟ್ಯಂತರ ರುಪಾಯಿ ಖರ್ಚು ಮಾಡಿ ಇರಕಲ್ ಗ್ರಾಮದ ಹೊರವಲಯದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಿದ್ದರೂ ಸಮೀಪದ ಪಾಮನಕಲ್ಲೂರು ಗ್ರಾಮದ ಕೆಲವು ಓಣಿಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ.
ಗ್ರಾಮದ 1, 2ನೇ ವಾರ್ಡಿನ ಕೌಜಪ್ಪ ತಾತನ ಮಠದ ಹಿಂಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಹನಿ ನೀರಿಗಾಗಿ ಮಹಿಳೆಯರು, ಮಕ್ಕಳು ನಿತ್ಯ ಅಲೆಯುವಂತಾಗಿದೆ.ಸುಮಾರು ಐದು ವರ್ಷಗಳಿಂದ ನೀರು ಸರಬರಾಜು ಮಾಡುವಲ್ಲಿ ವ್ಯತ್ತಯ ಉಂಟಾಗುತ್ತಿದ್ದು ಹೊಸದಾಗಿ ಪೈಪ್ ಅಳವಡಿಸುವಂತೆ ಜನರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಲಕ್ಷ್ಮಣ ಚೌಡ್ಲಿ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಈರಮ್ಮ ಕೊಂಡಾಲ ಆರೋಪಿಸಿದರು.
ಗ್ರಾಮಕ್ಕೆ ನೀರು ಸರಬರಾಜು ಮಾಡಲು ಎಂಟು ಕೊಳವೆಬಾವಿ ಕೊರೆಯಿಸಲಾಗಿದೆ ಎಂದು ಸ್ಥಳೀಯ ಆಡಳಿತ ಹೇಳುತ್ತಿದ್ದರೂ ಓಣಿಗಳಲ್ಲಿ ನೀರಿನ ಬವಣೆ ಮಾತ್ರ ಕಡಿಮೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಹನಿ ನೀರಿಗಾಗಿ ಕೆಲಸ ಬಿಟ್ಟು ತಿರುಗಾಡುವಂತಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಗಮನಹರಿಸಬೇಕು ಎಂದು ಅಯ್ಯಮ್ಮ ಅರಿಕೇರಿ, ಮಲ್ಲಮ್ಮ ಯದ್ದಲದೊಡ್ಡಿ, ಅಮರಮ್ಮ ಹುಣಸಿಗಿ, ಭಾಗ್ಯಶ್ರೀ, ಶಾರದಮ್ಮ, ದುರುಗಮ್ಮ, ಗುಂಡಪ್ಪ, ಗೋಪಾಲಪ್ಪ, ದುರುಗಪ್ಪ ಒತ್ತಾಯಿಸಿದರು.