ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನ ೧೦ ಗ್ರಾಪಂಗಳ ಸುಮಾರು ೨೨ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಈ ಸಮಸ್ಯೆ ತಲೆ ಎತ್ತದಂತೆ ಮಾಡಲು ಕಾಮಗಾರಿ ಮುಕ್ತಾಯಗೊಂಡಿರುವ ೫೫ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲೇಬೇಕಿದೆ. ಮತ್ತೊಮ್ಮೆ ಈ ವಿಚಾರದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಚಿವರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇದಲ್ಲದೆ ಇನ್ನುಳಿದ ೩೨ ಕಾಮಗಾರಿ ಪಗ್ರತಿ ಹಂತದಲ್ಲಿದ್ದು ವಿದ್ಯುತ್ ಇಲಾಖೆಗೆ ಹಣ ಪಾವತಿಸಬೇಕಿದೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿದ್ಯುತ್ ಇಲಾಖೆಯ ತಾಂತ್ರಿಕ ತೊಡಕುಗಳು ಕುಡಿಯುವ ನೀರಿನ ಯೋಜನೆಗಳ ಪ್ರಗತಿಗೆ ಅಡ್ಡಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಬುಧವಾರ ತಾಲೂಕು ಪಂಚಾಯ್ತಿ ಸಂಭಾಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ಫೋರ್ಸ್ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯಂತೆ ಈ ತಿಂಗಳ ೨೬ರ ಒಳಗಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕಿದೆ. ಆದರೆ, ನಮ್ಮ ತಾಲೂಕಿನಲ್ಲಿ ಮೂರು ತಿಂಗಳ ಹಿಂದೆ ನಡೆದಿರುವ ಕಾಮಗಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ.
ತಾಲೂಕಿನಲ್ಲಿ ೮೭ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಇದರಲ್ಲಿ ೫೫ ಭೌತಿಕ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ವಿದ್ಯುತ್ ಇಲಾಖೆಗೆ ₹ ೭೬ ಲಕ್ಷ ಹಣ ಸಹ ಪಾವತಿಸಿ ಮೂರು ತಿಂಗಳಾದರೂ ವಿದ್ಯುತ್ ಇಲಾಖೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡುತ್ತಿದೆ. ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದರು ಪ್ರಯೋಜವಾಗಿಲ್ಲ. ಬೇಸಿಗೆ ಹಿನ್ನೆಲೆಯಲ್ಲಿ ತಾಲೂಕಿನ ೧೦ ಗ್ರಾಪಂಗಳ ಸುಮಾರು ೨೨ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದ್ದು, ಈ ಸಮಸ್ಯೆ ತಲೆ ಎತ್ತದಂತೆ ಮಾಡಲು ಕಾಮಗಾರಿ ಮುಕ್ತಾಯಗೊಂಡಿರುವ ೫೫ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲೇಬೇಕಿದೆ. ಮತ್ತೊಮ್ಮೆ ಈ ವಿಚಾರದ ಬಗ್ಗೆ ಸಂಬಂಧಪಟ್ಟ ಇಲಾಖೆಯ ಸಚಿವರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇದಲ್ಲದೆ ಇನ್ನುಳಿದ ೩೨ ಕಾಮಗಾರಿ ಪಗ್ರತಿ ಹಂತದಲ್ಲಿದ್ದು ವಿದ್ಯುತ್ ಇಲಾಖೆಗೆ ಹಣ ಪಾವತಿಸಬೇಕಿದೆ ಎಂದರು.ಸರ್ಕಾರಿ ಭೂಮಿಯಲ್ಲಿ ಮನೆಕಟ್ಟಿದವರಿಗೆ ಗ್ರಾಪಂ ಪರವನಾಗಿ ನೀಡದ ಕಾರಣ ಮನೆಕಟ್ಟಿದವರಿಗೆ ವಿದ್ಯುತ್ ಇಲಾಖೆ ವಿದ್ಯುತ್ ಸಂಪರ್ಕ ನೀಡಲು ನಿರಾಕರಿಸುತ್ತಿದೆ. ಪರಿಣಾಮ ತಾಲೂಕಿನ ಸಾಕಷ್ಟು ಕುಟುಂಬಗಳು ಕತ್ತಲಲ್ಲಿ ವಾಸಿಸುವಂತಾಗಿದೆ. ಗ್ರಾಪಂಗಳ ಪರವನಾಗಿ ಇಲ್ಲದ ಕಾರಣ ಯಾವುದೇ ಸೌಲಭ್ಯಗಳಿನ್ನು ಒದಗಿಸದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಕಾಡುಮಾನವರಂತೆ ಬದುಕು ನಡೆಸಬೇಕಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.
ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ನೀಡಿ: ಸ್ಥಳಿಯ ವಿದ್ಯುತ್ ಗುತ್ತಿಗೆದಾರರಿಗೆ ಕಾಮಗಾರಿ ನೀಡುವಂತೆ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಶಾಸಕ ಸಿಮೆಂಟ್ ಮಂಜು ಅವರಿಗೆ ಮನವಿ ಮಾಡಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರೇಮನಾಥ್ ಮಾತನಾಡಿ, ಸೆಸ್ಕಾಂ, ಜಿಪಂ, ತಾಪಂ ಹಾಗೂ ಪುರಸಭೆಯಲ್ಲಿನ ವಿದ್ಯುತ್ ಕಾಮಗಾರಿಗಳು ಬಹುತೇಕ ಹೊರಭಾಗದ ಗುತ್ತಿಗೆದಾರರ ಪಾಲಾಗುತ್ತಿವೆ. ಪ್ರಸ್ತುತ ತಾಲೂಕಿನ ಸೆಸ್ಕಾಂ ಇಲಾಖೆಯಲ್ಲಿ ೩೬ ಕುಡಿಯುವ ನೀರಿನ ಕಾಮಗಾರಿಗಳು ನಡೆಯುತ್ತಿದ್ದು ಇದರಲ್ಲಿ ಹೊರಭಾಗದ ಗುತ್ತಿಗೆದಾರರಿಗೆ ಹೆಚ್ಚು ಕಾಮಗಾರಿ ನೀಡುವ ಮೂಲಕ ಸ್ಥಳೀಯ ಗುತ್ತಿಗೆದಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸ್ಥಳದಲ್ಲೇ ಇದ್ದ ಸೆಸ್ಕಾಂ ಎಇಇ ಹರೀಶ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಏಪ್ರಿಲ್ ೨೭ರಂದು ಸ್ಥಳೀಯ ಗುತ್ತಿಗೆದಾರರ ಸಭೆ ನಡೆಸಿ ೩೬ ಕಾಮಗಾರಿ ನಡೆಸುವ ಗುತ್ತಿಗೆದಾರರ ಪಟ್ಟಿಯನ್ನು ಸಿದ್ಧಪಡಿಸಿ ನೀಡುವಂತೆ ಸೂಚನೆ ನೀಡಿದ್ದೆ. ಸಭೆ ನಡೆದು ಮೂರುವಾರಗಳಾದರೂ ಇದುವರಗೆ ಪಟ್ಟಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಮಳೆಗಾಲ ಇರುವುದರಿಂದ ಅನ್ಯರಿಂದ ಕೆಲಸ ಮಾಡಿಸುವುದು ಅನಿವಾರ್ಯವಾಗಿದೆ ಎಂದು ಭಾವುಕರಾದ ಅಧಿಕಾರಿ, ಸಾರ್ ಕಚೇರಿಯಲ್ಲಿ ಕೆಲಸ ಮಾಡುವುದೇ ಕಷ್ಟಕರವಾಗಿದೆ. ಅನವಶ್ಯಕವಾಗಿ ಕೆಲವು ಗುತ್ತಿಗೆದಾರರೆ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಮಾನಸಿಕವಾಗಿ ಹಿಂಸಿಸುತ್ತಾರೆ. ಅನ್ಯ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ನೀಡುವ ಗುತ್ತಿಗೆದಾರರು ಸ್ಥಳೀಯ ಅಧಿಕಾರಿಗಳನ್ನು ಲಘುವಾಗಿ ಪರಿಗಣಿಸುತ್ತಾರೆ. ಕಾನೂನು ಪಾಲನೆಯೆ ಇವರಿಗೆ ದೊಡ್ಡ ತೊಡಕಾಗಿದೆ ಎಂದರು. ಮಧ್ಯೆ ಪ್ರವೇಶಿಸಿದ ಶಾಸಕ ಹೊಂದಣಿಕೆ ಇಲ್ಲದ ಸ್ಥಳದಲ್ಲಿ ಇಂತಹ ಸಮಸ್ಯೆಗಳು ಉದ್ಬವಿಸುತ್ತವೆ. ಮುಂದಿನ ದಿನಗಳಲ್ಲಿ ಇಲಾಖೆಯ ಮಾನದಂಡವನ್ನು ಆಧರಿಸಿ ಸ್ಥಳೀಯ ಗುತ್ತಿಗೆದಾರರಿಗೆ ಮೊದಲ ಆದ್ಯತೆಯಲ್ಲಿ ಕೆಲಸ ನೀಡಿ ಎಂದರು.ಈ ವೇಳೆ ತಾಪಂ ಕಾರ್ಯಾನಿರ್ವಹಣಾಧಿಕಾರಿ ಗಂಗಾಧರ್, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಉಪಸ್ಥಿತರಿದ್ದರು.