ಸಾರಾಂಶ
ಕೃಷಿ ಯಂತ್ರಗಳು ಆಧುನೀಕರಣಗೊಂಡಂತೆ 50 ಎಕ್ಕರೆ ಜಮೀನಿದ್ದರೂ ಯಂತ್ರಗಳನ್ನು ಬಳಸಿಕೊಂಡು ವೇಗವಾಗಿ ಕೃಷಿ ಮಾಡಬಹುದು ಎಂಬ ಧೈರ್ಯ ಈಗ ರೈತರಿಗೆ ಬಂದಿದೆ. "ಬೇಸಾಯ ಮನೆ-ಮಂದಿ ಎಲ್ಲಾ ಸಾಯ " ಎಂಬ ಮಾತು ಚಾಲ್ತಿಯಲ್ಲಿತ್ತು.
ಬಾ.ರಾ.ಮಹೇಶ್ ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಕೃಷಿ ಯಂತ್ರಗಳು ಆಧುನೀಕರಣಗೊಂಡಂತೆ 50 ಎಕ್ಕರೆ ಜಮೀನಿದ್ದರೂ ಯಂತ್ರಗಳನ್ನು ಬಳಸಿಕೊಂಡು ವೇಗವಾಗಿ ಕೃಷಿ ಮಾಡಬಹುದು ಎಂಬ ಧೈರ್ಯ ಈಗ ರೈತರಿಗೆ ಬಂದಿದೆ. "ಬೇಸಾಯ ಮನೆ-ಮಂದಿ ಎಲ್ಲಾ ಸಾಯ " ಎಂಬ ಮಾತು ಚಾಲ್ತಿಯಲ್ಲಿತ್ತು. ಪ್ರಸ್ತುತ ಹೊಲ ಹಸನು ಮಾಡುವುದುರಿಂದ ಹಿಡಿದು ಬಿತ್ತನೆಯ ಸಾಲುಗಳ ನಾಟಿ ಮಾಡುವುದು, ಕಟಾವು ಮಾಡುವುದು, ಹಾಗೂ ಔಷಧಿ ಸಿಂಪರಣೆ ಮಾಡಲು ಡ್ರೋನ್ ಯಂತ್ರ ಬಳಕೆಗೆ ಬಂದಿರುವುದು ರೈತಾಪಿವರ್ಗಕ್ಕೆ ವರದಾನವಾಗಿದೆ.
ಒಂದು ಎಕರೆ ಪ್ರದೇಶದ ಬೆಳೆಗೆ ಬೇಕಾಗುವಂತಹ 10ಲೀ. ಔಷಧಿಯನ್ನು 5ರಿಂದ 10ನಿಮಿಷದಲ್ಲಿ ಬೆಳೆಗಳಿಗೆ ಸಿಂಪರಣೆ ಮಾಡುವುದನ್ನು ನೋಡುವುದೇ ಒಂದು ಕೌತುಕ. ಒಂದು ದಿನದಲ್ಲಿ ನೂರಾರು ಎಕರೆ ಪ್ರದೇಶಗಳ ಬೆಳೆಗಳಿಗೆ ಔಷಧಿಯನ್ನು ಸಿಂಪರಣೆ ಮಾಡುವ ಸಾಮಥ್ಯ ಈ ಡ್ರೋಣ್ ಯಂತ್ರಕ್ಕಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಮತ್ತು ಕೃಷಿ ಅಧಿಕಾರಿ ಮೇತಾಬ್ ಆಲಿ ಹೇಳುತ್ತಾರೆ.ಚನ್ನಗಿರಿ ತಾಲೂಕಿನ ಶಿವಕುಳೆನೂರು ಎಂಬ ಗ್ರಾಮದಲ್ಲಿ 60 ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಸೋಯಾಬಿನ್ ಬೆಳೆಗೆ ಡ್ರೋಣ್ ಯಂತ್ರದ ಮೂಲಕ ಔಷಧಿಯನ್ನು ಸಿಂಪಡಿಸಿದ್ದಾರೆ. ಇದರಿಂದ ರೈತ ಸಮೂಹ ಹರ್ಷಗೊಂಡಿದೆ.
ಕಳೆದ 30-40 ವರ್ಷಗಳ ಹಿಂದೆ ಹೊಲಗಳನ್ನು ಹುಳುಮೆ ಮಾಡಲು ಮರದ ನೇಗಿಲು, ಎಡೆ ಕುಂಟೆಯಂತಹ ಸಾಂಪ್ರದಾಯಿಕ ಯಂತ್ರಗಳನ್ನು ಬೇಸಾಯಕ್ಕೆ ಬಳಸಲಾಗುತ್ತಿತ್ತು. ಬೇಸಾಯ ಪದ್ದತಿಯಲ್ಲಿ ಆಧುನಿಕಯಂತ್ರಗಳನ್ನು ಉಳುಮೆಗೆ ಬಳಸಿಕೊಳ್ಳುತ್ತಿರುವ ಪರಿಣಾಮ ಎತ್ತುಗಳ ಪಾತ್ರ ನಿಧಾನವಾಗಿ ಕಣ್ಮರೆಯಾಗುತ್ತಿದೆ. ಆದರೂ ತೋಟದ ಬೆಳೆಗಳಿಂದ ಹಿಡಿದು ಕೃಷಿ ಬೆಳೆಗಳಿಗೂ ಔಷಧಿ ಸಿಂಪರಣೆಗೆ ಡ್ರೋಣ್ ಯಂತ್ರವು ಹೆಚ್ಚು ಅನುಕೂಲವಾಗಲಿದೆ. ಇದರಿಂದ ಸಮಯದ ಉಳಿತಾಯ, ಕಡಿಮೆ ನೀರಿನ ಬಳಕೆ, ಹಾಗೂ ಕಡಿಮೆ ವೆಚ್ಚದಲ್ಲಿ ಔಷಧಿ ಸಿಂಪರಣೆಗೆ ಸಹಕಾರಿಯಾಗಲಿದೆ.