ಕೆ.ಆರ್.ಪೇಟೆ:

ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಮೇವು ಪಡಿತರ ನೀತಿ ಜಾರಿಗೆ ತರುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ನಿರೀಕ್ಷಿತ ಪ್ರಮಾಣದ ಮಳೆಯಾಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲದ ಸನ್ನಿವೇಶ ನಿರ್ಮಾಣವಾಗಿದೆ. ರೈತರು ಬೆಳೆ ಬೆಳೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆರೆ-ಕಟ್ಟೆಗಳು ಭರ್ತಿಯಾಗದೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಪಂಪ್ ಸೆಟ್ ಆಧಾರಿತ ಕೃಷಿ ಮೇಲೂ ವ್ಯತಿರಿಕ್ತ ಪರಿಣಾಣ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸರ್ಕಾರ ಜನರ ಹಿತರಕ್ಷಣೆಗೆ ನೀಡುವಷ್ಟೇ ಆದ್ಯತೆಯನ್ನು ರೈತ ಕುಟುಂಬಗಳ ಜೀವನಾಡಿ ದನಕರುಗಳ ಸಂರಕ್ಷಣೆಗೂ ನೀಡಬೇಕು. ಮೇವಿನ ಅಭಾವ ಕಾಣಿಸಿಕೊಳ್ಳುತ್ತಿದ್ದು, ಹೈನುಗಾರಿಕೆಯನ್ನೆ ನಂಬಿ ಬದುಕುತ್ತಿರುವ ರೈತ ಕುಟುಂಬಗಳು ಆತಂಕಕ್ಕೆ ಸಿಲುಕಿವೆ ಎಂದಿದ್ದಾರೆ.

ಬರಗಾಲದಿಂದ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಕೆರೆಗಳಲ್ಲಿ ನೀರಿಲ್ಲದೆ ಕೆರ ಬಯಲಿನ ಪ್ರದೇಶಗಳು ಒಣಗಿ ನಿಂತಿವೆ. ಇಂತಹ ಕಠಿಣ ಸನ್ನಿವೇಶದಲ್ಲಿ ಹೈನುಗಾರಿಕೆಯನ್ನು ನಂಬಿ ಬದುಕುತ್ತಿರುವ ರೈತರು ತಮ್ಮ ಭೂಮಿಯಲ್ಲಿ ಜಾನುವಾರುಗಳಿಗೆ ಅಗತ್ಯವಾದ ಮೇವು ಬೆಳೆಯಲಾಗುತ್ತಿಲ್ಲ. ಮೇವು ಸಿಗದೆ ರೈತರು ಒಂದಷ್ಟು ಹಸಿರಿರುವ ಪ್ರದೇಶಗಳನ್ನು ಹುಡುಕಿಕೊಂಡು ಹೋಗಿ ಜಾನುವಾರುಗಳಿಗೆ ಅಗತ್ಯ ಮೇವು ತರುವ ಕೆಲಸ ಮಾಡುತ್ತಿದ್ದು, ನಿರೀಕ್ಷಿತ ಮಳೆಯಾಗದಿದ್ದರೆ ಒಂದಷ್ಟು ಹಸಿರಿರುವ ತಾಣಗಳೂ ಕಣ್ಮರೆಯಾಗಲಿವೆ ಎಂದು ಎಚ್ಚರಿಸಿದ್ದಾರೆ.


ಸರ್ಕಾರ ಹೈನುಗಾರಿಕೆಯನ್ನು ಅವಲಂಭಿಸಿರುವ ರೈತ ಕುಟುಂಬಗಳ ನೆರವಿಗೆ ಅಗತ್ಯ ಯೋಜನೆ ರೂಪಿಸಿಬೇಕು. ಬರಗಾಲದಲ್ಲಿ ಗೋಶಾಲೆಗಳನ್ನು ತೆರೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಪಶು ಸಂಗೋಪನಾ ಇಲಾಖೆ ಮೂಲಕ ಜಾನುವಾರುಗಳಿರುವ ರೈತರ ಮನೆಗಳನ್ನು ಗುರುತಿಸಿ ಬಡಜನರಿಗೆ ಪಡಿತರ ಚೀಟಿ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ರೀತಿಯಲ್ಲಿ ಮೇವು ಪಡಿತರ ನೀತಿಯನ್ನು ಜಾರಿಗೆ ತರಬೇಕು ಮನವಿ ಮಾಡಿದ್ದಾರೆ.