ಸಾರಾಂಶ
ರೈತರ ಬ್ಯಾಂಕ್ ಖಾತೆ ಸರಿಪಡಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ನಿರ್ದೇಶನ । ಬೆಳೆ ಪ್ರಮಾಣಕ್ಕನುಸಾರವಾಗಿ ಪರಿಹಾರ ವಿತರಣೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 1,04,492 ರೈತರ ಖಾತೆಗೆ ಎರಡು ಹಂತಗಳಲ್ಲಿ ಡಿಬಿಟಿ ಮೂಲಕ ಒಟ್ಟು 112.84 ಕೋಟಿ ರು. ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ ಸುಶೀಲಾ ತಿಳಿಸಿದ್ದಾರೆ.2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಗದ ಕಾರಣ ಸರ್ಕಾರ ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರಕಾರವು ಘೋಷಣೆ ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಹಾನಿಯಾಗಿರುವ ಬೆಳೆಗಳಿಗೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆಧಾರದ ಮೇರೆಗೆ ಫ್ರೂಟ್ಸ್ ಐಡಿ ಹೊಂದಿರುವ, ಪಹಣಿ ಜೋಡಣೆಯಾಗಿರುವ ರೈತರ ಖಾತೆಗಳಿಗೆ ಡಿಬಿಟಿ ಮೂಲಕ ಎಸ್ಡಿಆರ್ಎಫ್ ಮಾರ್ಗಸೂಚಿಯಂತೆ ಈಗಾಗಲೇ 9 ಕಂತುಗಳಲ್ಲಿ ಮೊದಲನೇ ಕಂತಾಗಿ ಗರಿಷ್ಠ 2000 ರು. ಬೆಳೆ ಪರಿಹಾರ 20.65 ಕೋಟಿ ರು. ಪರಿಹಾರ ಒಟ್ಟು 1,04,492 ರೈತರಿಗೆ ವಿತರಿಸಲಾಗಿದೆ.ಅದರಂತೆ, 2ನೇ ಹಂತದಲ್ಲಿ ಜಿಲ್ಲೆಯ ಅರ್ಹ 91,077 ರೈತರುಗಳಿಗೆ ಎನ್ಡಿಆರ್ಎಫ್ ಮಾರ್ಗಸೂಚಿನ್ವಯ 92.19 ಕೋಟಿ ರು. ಪರಿಹಾರವನ್ನು(ಇನ್ ಪುಟ್ ಸಬ್ಸಿಡಿ) ವಿತರಣೆ ಮಾಡಲು ಅನುಮೋದನೆ ನೀಡಿ ಡಿಬಿಟಿ ಮೂಲಕ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಲ್ಲಿಯವರೆಗೆ 2 ಹಂತದಲ್ಲಿ ಒಟ್ಟು 1,04,492 ರೈತರಿಗೆ 112.84 ಕೋಟಿ ರು. ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.13,427ರೈತರಿಗೆ ಜಮೆ ಆಗದ ಪರಿಹಾರ: ಜಿಲ್ಲೆಯ ಒಟ್ಟು 1,04,492 ರೈತರ ಪೈಕಿ 13,427 ರೈತರು ಆಧಾರ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆ ಆಗದ ಕಾರಣ ಪರಿಹಾರದ ಹಣ ಜಮೆ ಆಗಿರುವುದಿಲ್ಲ. ಸದರಿ ವಿಷಯದ ಕುರಿತು ಈಗಾಗಲೇ ತಹಸೀಲ್ದಾರರಿಗೆ ಬ್ಯಾಂಕಿಗೆ ಜೋಡಣೆಯಾಗದೇ ಇರುವ ರೈತರ ಬ್ಯಾಂಕ್ ಖಾತೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ. ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯ ಆಗಿರುವುದರಿಂದ ಇದುವರೆಗೂ ಫ್ರೂಟ್ಸ್ ಐಡಿ ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಗೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಫ್ರೋಟ್ಸ್ ಐಡಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಇಲ್ಲವಾದಲ್ಲಿ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗುವುದಿಲ್ಲವೆಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪರಿಹಾರ ವಿವರ: ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ಮಾರ್ಗಸೂಚಿನ್ವಯ ಮಳೆಯಾಶ್ರಿತ ಬೆಳೆಗಳಿಗೆ ಒಂದು ಹೇಕ್ಟರ್ ಗೆ 8500 ರು. ನೀರಾವರಿ ಬೆಳೆಗಳಿಗೆ ಒಂದು ಹೇಕ್ಟರ್ಗೆ 17,000 ರು. ಹಾಗೂ ತೋಟಗಾರಿಕೆ ಬೆಳೆಗಳಿಗೆ ಒಂದು ಹೇಕ್ಟರ್ಗೆ 22,500 ರು. ಬೆಳೆ ಪ್ರಮಾಣಕ್ಕನುಸಾರವಾಗಿ ಬೆಳೆ ಹಾನಿಯಾಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.