ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಸಿ, ಹಿಂದು ಧರ್ಮದ ಹೆಸರಿನಲ್ಲಿ ಧರ್ಮ ಸಂಸತ್ತು ಸ್ಥಾಪಿಸುವ ಮೂಲಕ ಮೇಲ್ಜಾತಿ ಹಿಡಿತವನ್ನು ಮರುಸ್ಥಾಪಿಸುವುದೇ ಬಿಜೆಪಿಯ ಗುರಿಯಾಗಿದೆ. ಇದನ್ನು ವಿರೋಧಿಸಿ ಕರಪತ್ರ ಹಂಚುವ ಮೂಲಕ ದಲಿತ ಸಂಘರ್ಷ ಸಮಿತಿ ಜನಜಾಗೃತಿ ಆಂದೋಲನ ಆರಂಭಿಸಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಎನ್.ಅಜ್ಜಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಹಿಂದುತ್ವ ಹೆಸರಿನಲ್ಲಿ ಧರ್ಮ ಸಂಸತ್ತು ಸ್ಥಾಪನೆಗೆ ಬಿಜೆಪಿ ಯತ್ನ: ಅಜ್ಜಪ್ಪ ಆರೋಪ - - -

- ಬಿಜೆಪಿ ಅಧಿಕಾರಕ್ಕೆ ಬರಲೆಂದೇ 400 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಕಾರಣಕ್ಕೆ ಅಪಾರ ಅಕ್ರಮ ಹಣ ಕೂಡಿಟ್ಟಿದ್ದಾರೆ

- 2025ಕ್ಕೆ ಸಂಘ ಪರಿವಾರಕ್ಕೆ 100 ವರ್ಷವಾಗಲಿದೆ, ಅಷ್ಟರಲ್ಲಿ ಮನು ಧರ್ಮ ಮರುಸ್ಥಾಪನೆ ಬಿಜೆಪಿ ಗುರಿ

- - -ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಸಿ, ಹಿಂದು ಧರ್ಮದ ಹೆಸರಿನಲ್ಲಿ ಧರ್ಮ ಸಂಸತ್ತು ಸ್ಥಾಪಿಸುವ ಮೂಲಕ ಮೇಲ್ಜಾತಿ ಹಿಡಿತವನ್ನು ಮರುಸ್ಥಾಪಿಸುವುದೇ ಬಿಜೆಪಿಯ ಗುರಿಯಾಗಿದೆ. ಇದನ್ನು ವಿರೋಧಿಸಿ ಕರಪತ್ರ ಹಂಚುವ ಮೂಲಕ ದಲಿತ ಸಂಘರ್ಷ ಸಮಿತಿ ಜನಜಾಗೃತಿ ಆಂದೋಲನ ಆರಂಭಿಸಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಎನ್.ಅಜ್ಜಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮದ ಸಂಸತ್ ಸ್ಥಾಪಿಸುವ ಉದ್ದೇಶದಿಂದಲೇ ಆರ್‌ಎಸ್‌ಎಸ್‌ ಸ್ಥಾಪನೆಯಾಗಿದೆ. 2025ಕ್ಕೆ ಸಂಘ ಪರಿವಾರಕ್ಕೆ 100 ವರ್ಷವಾಗಲಿದೆ. ಅಷ್ಟರಲ್ಲಿ ಮನು ಧರ್ಮದ ಮರುಸ್ಥಾಪನೆ ಮಾಡುವುದೇ ಬಿಜೆಪಿ ಗುರಿಯಾಗಿದೆ ಎಂದು ಟೀಕಿಸಿದರು.

ಮತ್ತೊಮ್ಮೆ ಭಾರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲೆಂದೇ 400 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಕಾರಣಕ್ಕೆ ಅಪಾರ ಅಕ್ರಮ ಹಣ ಕೂಡಿಟ್ಟಿದ್ದಾರೆ. ವಿಪಕ್ಷಗಳ ಮೇಲೆ ಐಟಿ, ಇಡಿ, ಸಿಪಿಐ ದಾಳಿ ಆರಂಭಿಸಿದ್ದಾರೆ. ತಮಗೆ ಬೇಕಾದ ವ್ಯಕ್ತಿಗಳನ್ನು ಎಲೆಕ್ಷನ್ ಕಮಿಷನರಾಗಿ ನೇಮಿಸಿದ್ದು, ದೊಡ್ಡ ಗೋಲ್ ಮಾಲ್‌ಗೆ ರಂಗವೂ ಸಜ್ಜಾಗಿದೆ ಎಂದು ಆರೋಪಿಸಿದರು.

ನೆಲದ ಪ್ರತಿರೋಧ ಪರಂಪರೆಯೂ ಬಲವಾಗಿದ್ದು,ಇಂದು ಇಡೀ ದೇಶದ ಯುವ ಜನರು, ದಮನಿತ ಸಮುದಾಯಗಳು, ಅಲ್ಪಸಂಖ್ಯಾತರು, ಪ್ರಜ್ಞಾವಂತರೆಲ್ಲಾ ಒಂದಾಗಿದ್ದಾರೆ. ಬಿಜೆಪಿಯನ್ನು ಸೋಲಿಸಲು ಸಂಘ ಪರಿವಾರದ ಷಡ್ಯಂತ್ರ ವಿಫಲಗೊಳಿಸಲು ಒಗ್ಗೂಡಿ ಶ್ರಮಿಸುತ್ತಿದ್ದಾರೆ. ರೈತರು 3 ವರ್ಷದಿಂದ ಅವಿರತ ಹೋರಾಟ ನಡೆಸಿದ್ದಾರೆ. ದೆಹಲಿಯಲ್ಲಿ ಐತಿಹಾಸಿಕ ಹೋರಾಟ ನಡೆಸಿ, 700ಕ್ಕೂ ಹೆಚ್ಚು ಜನ ಬಲಿದಾನ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಸಮಿತಿ ಮುಖಂಡರಾದ ಡಿ.ಜಿ.ರಾಜಪ್ಪ, ಅಣ್ಣಪ್ಪ, ಆನಂದ, ಸೋಮಶೇಖರ, ಮಣಿಕಂಠ, ಲಿಂಗರಾಜು ಇತರರು ಇದ್ದರು.

- - -

ಬಾಕ್ಸ್‌ ಸಂವಿಧಾನ ರಕ್ಷಣೆಯೇ ಪ್ರಥಮ ಆದ್ಯತೆಮತ್ತೊಂದು ಪ್ರತಿ ಕ್ರಾಂತಿಗೆ ಗುರಿಯಾಗದಂತೆ ದೇಶವನ್ನು ತಡೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಎನ್.ಅಜ್ಜಪ್ಪ ಹೇಳಿದರು.

ಏನು ಮಾಡಲು ಆಗುತ್ತದೆ ಬಿಡು, ಯಾರು ಬಂದರೂ ಅಷ್ಟೇ, ಕಾಂಗ್ರೆಸ್‌ನವರು ಏನು ಕಡಿಮೆಯಾ ಎನ್ನುವಂತಹ ನಿರಾಸೆಯ, ನಿಸ್ತೇಜನಗೊಳಿಸುವ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಅಂಬೇಡ್ಕರ್‌ ಪರಿಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆ. ಸಂವಿಧಾನವನ್ನು ಕಾಪಾಡಿಕೊಳ್ಳುವುದು ಪ್ರಪ್ರಥಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

- - -