ದುಗ್ಗಮ್ಮ ಜಾತ್ರೆ: ಪ್ರಾಣಿ ಬಲಿಗೆ ಅವಕಾಶವಿಲ್ಲ: ದೇವಸ್ಥಾನ ಸಮಿತಿ ಸ್ಪಷ್ಟನೆ

| Published : Mar 14 2024, 02:08 AM IST

ದುಗ್ಗಮ್ಮ ಜಾತ್ರೆ: ಪ್ರಾಣಿ ಬಲಿಗೆ ಅವಕಾಶವಿಲ್ಲ: ದೇವಸ್ಥಾನ ಸಮಿತಿ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನ ಬಳಿ ಪ್ರಾಣಿ ಬಲಿಯಾಗಲೀ, ರಕ್ತಪಾತವಾಗಲೀ ಆಗುವುದಿಲ್ಲ. ಸಮಿತಿ ಅಧ್ಯಕ್ಷರೂ ಆದ ಶಾಸಕರು, ಸಚಿವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ದೇವಸ್ಥಾನ ಹಾಗೂ ಸುತ್ತಮುತ್ತ ಯಾವುದೇ ಪ್ರಾಣಿ ಬಲಿಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗಿಂತ ನಾವು ಹೆಚ್ಚು ಗಮನ ಹರಿಸುತ್ತೇವೆ. ದೇವಸ್ಥಾನ ಬಳಿ ಪ್ರಾಣಿ ಬಲಿ ಎಂಬ ಮಾತು ವಾಪಸ್‌ ಪಡೆಯುವಂತೆ ಶಂಕರ ನಾರಾಯಣರಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ಹಾಗೂ ಪ್ರತಿ 5 ವರ್ಷಕ್ಕೊಮ್ಮೆ ಜಾತ್ರೆ ಆಚರಿಸಬೇಕೆಂಬ ವಿಚಾರಕ್ಕೆ ಪರ-ವಿರೋಧ ಚರ್ಚೆಗಳಾದ ಘಟನೆ ನಗರದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶ್ರೀದುರ್ಗಾಂಬಿಕಾ ದೇವಿ ಜಾತ್ರೆ, ಹೋಳಿ, ರಂಜಾನ್ ಹಾಗೂ ಗುಡ್‌ ಫ್ರೈಡೇ ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅಧ್ಯಕ್ಷತೆಯಲ್ಲಿ ನಡೆದ ನಾಗರಿಕ ಸೌಹಾರ್ದ ಸಭೆಯಲ್ಲಿ ನಗರ ದೇವತೆ ಜಾತ್ರೆ ವೇಳೆ ಪ್ರಾಣಿ ಬಲಿ ಹಾಗೂ 5 ವರ್ಷಕ್ಕೊಮ್ಮೆ ಜಾತ್ರೆ ಆಚರಣೆ ಕುರಿತ ಸಲಹೆ ಬಗ್ಗೆ ಪರ-ವಿರೋಧ ಚರ್ಚೆಗೆ ಸಭೆ ವೇದಿಕೆಯಾಯಿತು.

ಹಿಂದೂ ಸಮಾಜದ ಮುಖಂಡ ಕೆ.ಬಿ.ಶಂಕರ ನಾರಾಯಣ ಮಾತನಾಡಿ, ದುಗ್ಗಮ್ಮ ದೇವಸ್ಥಾನ ಸುತ್ತಮುತ್ತ ಪ್ರಾಣಿ ಬಲಿ ನೀಡಿ, ಅಲ್ಲೆಲ್ಲಾ ಗಲೀಜಾಗುತ್ತದೆ. ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿದ್ದ ಅಂತಹದ್ದಕ್ಕೆಲ್ಲಾ ಆಸ್ಪದ ನೀಡದೇ, ದೇವಸ್ಥಾನ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡಬೇಕು. ಅಗತ್ಯ ಸಿಬ್ಬಂದಿ ದೇವಸ್ಥಾನ ಬಳಿ ನಿಯೋಜಿಸಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಆಕ್ಷೇಪಿಸಿದ ದೇವಸ್ಥಾನ ಸಮಿತಿ ಧರ್ಮದರ್ಶಿ ಗೌಡರ ಚನ್ನಬಸಪ್ಪ, ದೇವಸ್ಥಾನ ಬಳಿ ಪ್ರಾಣಿ ಬಲಿಯಾಗಲೀ, ರಕ್ತಪಾತವಾಗಲೀ ಆಗುವುದಿಲ್ಲ. ಸಮಿತಿ ಅಧ್ಯಕ್ಷರೂ ಆದ ಶಾಸಕರು, ಸಚಿವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ದೇವಸ್ಥಾನ ಹಾಗೂ ಸುತ್ತಮುತ್ತ ಯಾವುದೇ ಪ್ರಾಣಿ ಬಲಿಯಾಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆಗಿಂತ ನಾವು ಹೆಚ್ಚು ಗಮನ ಹರಿಸುತ್ತೇವೆ. ದೇವಸ್ಥಾನ ಬಳಿ ಪ್ರಾಣಿ ಬಲಿ ಎಂಬ ಮಾತು ವಾಪಸ್‌ ಪಡೆಯುವಂತೆ ಶಂಕರ ನಾರಾಯಣರಿಗೆ ಹೇಳಿದರು.

ಸೌಹಾರ್ದದಿಂದ ಜಾತ್ರೆ ಆಚರಿಸೋಣ:

ಎಸ್ಪಿ ಉಮಾ ಪ್ರಶಾಂತ ಮಧ್ಯ ಪ್ರವೇಶಿಸಿ, ಸಭೆಯಲ್ಲಿ ಎಲ್ಲರಿಗೂ ಅಭಿಪ್ರಾಯ ಮಂಡಿಸಲು ಅವಕಾಶ ಇದೆ. ಯಾರೇ ಅನಿಸಿಕೆ ಹೇಳಿದರೂ ಅದಕ್ಕೆ ವಿರುದ್ಧ ಮಾತನಾಡಬಾರದು. ಪರ-ವಿರೋಧ ಮಾತನಾಡಲು ಅ‍ವಕಾಶ ಇಲ್ಲ ಎಂದು ಹೇಳಿದರು. ಮಾತು ಮುಂದುವರಿಸಿದ ಗೌಡರ ಚನ್ನಬಸಪ್ಪ, ಯಾವುದೇ ಸಮುದಾಯದ ಹಬ್ಬಗಳಾಗಲೀ ಎಲ್ಲರೂ ಸಾಮರಸ್ಯದಿಂದ ಭಾಗಿಯಾಗಿ, ಯಾವುದೇ ಕಹಿ ಘಟನೆ ನಡೆಯದಂತೆ ಬೆರೆತು ಹೋಗಬೇಕು. ಸುಮಾರು 15 ಲಕ್ಷಕ್ಕೂ ಅಧಿಕ ಜನರು ಜಾತ್ರೆಗೆಂದು ನಗರಕ್ಕೆ ಆಗಮಿಸಲಿದ್ದು, ರಾಜ್ಯದ ದೊಡ್ಡ ಜಾತ್ರೆ ಇದಾಗಿದ್ದು, ಹಿಂದು-ಕ್ರೈಸ್ತ-ಮುಸಲ್ಮಾನರೆಲ್ಲರೂ ಸೇರಿ, ಸೌಹಾರ್ದದಿಂದ ಜಾತ್ರೆ ಆಚರಿಸೋಣ. ಈ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸೋಣ ಎಂದು ಮನವಿ ಮಾಡಿದರು.

ಬೇವಿನುಡುಗೆಗೆ ಅವಕಾಶ ಬೇಡ:

ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ಮಾ.18ರ ಮಂಗಳವಾರ ಮಹಿಳೆಯರು ಒಪ್ಪೊತ್ತಿದ್ದು, ಬೇವು ಬೇಟೆ ಹೆಸರಿನಲ್ಲಿ ಎಡೆ ಹಾಕಲು ಬರುತ್ತಾರೆ. ಬೇವಿನುಡುಗೆ ಕಡ್ಡಾಯವಾಗಿ ನಿಷೇಧಿಸಬೇಕು. ಹರಕೆ ತೀರಿಸುವವರು ಬೇಕಿದ್ದರೆ ಕೈಯಲ್ಲಿ ಬೇವಿನೆಲೆ ಹಿಡಿದುಕೊಂಡು ಬರಲಿ. ಯಾವುದೇ ಕಾರಣಕ್ಕೂ ಬೇವಿನುಡುಗೆಗೆ ಅವಕಾಶ ಕೊಡಬೇಡಿ. ಪೌರ ಕಾರ್ಮಿಕರ ತಂಡ ರಚಿಸಿ, ಬೇವಿನುಡುಗೆ ಬಿಟ್ಟ ಸ್ಥಳದ ಸ್ವಚ್ಛತೆ ನಿರಂತರ ಕಾಪಾಡಬೇಕು. ಸ್ಥಳದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಡಳಿತದಿಂದ ದುಗ್ಗಮ್ಮನ ಜಾತ್ರೆ ಪ್ರತಿ 5 ವರ್ಷಕ್ಕೊಮ್ಮೆ ಆಚರಿಸಬೇಕು. ಕಳೆದ ಸಲ ಮಾಡಿದ್ದ ಜಾತ್ರೆ ಸಾಲವನ್ನೇ ಜನ ಇನ್ನೂ ತೀರಿಸಲು ಸಾಧ್ಯವಾಗಿಲ್ಲ. ಇಂತಹ ಗಂಭೀರ ಕಾರಣ‍ ಗಮನದಲ್ಲಿಟ್ಟು ಬಡ, ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸುಧಾರಣೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಕೆಪಿಸಿಸಿ ಎಸ್ಸಿ ಘಟಕದ ಮುಖಂಡ ಸೋಮಲಾಪುರ ಹನುಮಂತಪ್ಪ ಧ್ವನಿಗೂಡಿಸಿ, 5 ವರ್ಷಕ್ಕೊಮ್ಮೆ ಜಾತ್ರೆಗೆ ಸಲಹೆ ನೀಡಿದರು. ಆಗ ಕಾಂಗ್ರೆಸ್ ಯುವ ಮುಖಂಡ ಎಲ್.ಎಂ.ಎಚ್‌.ಸಾಗರ್ ಸೇರಿ ಅನೇಕರು ಆಕ್ಷೇಪಿಸಿದರು.

ದೇವಸ್ಥಾನ ಧರ್ಮದರ್ಶಿ ಬಿ.ಎಚ್.ವೀರಭದ್ರಪ್ಪ ಮಾತನಾಡಿ, 5 ವರ್ಷಕ್ಕೊಮ್ಮೆ ಜಾತ್ರೆ ಎಂಬುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಹಬ್ಬದ ಹಿಂದಿನ ದಿನ ಮಾ.17ರಂದು ಗಾಂಧಿ ನಗರದಿಂದ ಮೆರವಣಿಗೆ ಆರಂಭವಾಗುತ್ತದೆ. ಅಂದು ಪೊಲೀಸ್ ಇಲಾಖೆ ಹೆಚ್ಚಿನ ರಕ್ಷಣೆ ನೀಡಬೇಕು. 3-4 ವರ್ಷದಿಂದ ಅಲ್ಲಿ ಗಲಾಟೆಯಾಗುತ್ತಿವೆ. ಅದನ್ನು ತಡೆಯಲು ಮೆರವಣಿಗೆ ವೇಳೆ ಮತ್ತು ಮಾ.19ರಂದು ಹೆಚ್ಚು ರಕ್ಷಣೆ, ಭದ್ರತೆ ಕಲ್ಪಿಸಬೇಕು. ಹಬ್ಬದ ವೇಳೆ ಸ್ವಚ್ಛತಾ ಕಾರ್ಯದ ಪೌರ ಕಾರ್ಮಿಕರಿಗೆ ರಕ್ಷಣಾ ಕವಚ ನೀಡಬೇಕು. ದೇವಸ್ಥಾನ ಸುತ್ತಮುತ್ತ ಯಾವುದೇ ಪ್ರಾಣಿ ಬಲಿ, ರಕ್ತಪಾತ ಆಗದು. ಯಾರೋ ಮನೆ ಮುಂದೆ ಪ್ರಾಣಿ ಬಲಿ ಕೊಟ್ಟರೆ ಅದಕ್ಕೆ ದೇವಸ್ಥಾನ ಸಮಿತಿ ಜವಾಬ್ಧಾರಿಯಲ್ಲ ಎಂದು ಸ್ಪಷ್ಟಪಡಿಸಿದರು.

ಅಪರ ಡಿಸಿ ಸೈಯದ್ ಅಫ್ರಿನಾ ಬಾನು ಎಸ್.ಬಳ್ಳಾರಿ, ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಎಎಸ್ಪಿ ವಿಜಯಕುಮಾರ ಸಂತೋಷ, ಎಸಿ ದುರ್ಗಾಶ್ರೀ, ಸ್ಮಾರ್ಟ್ ಸಿಟಿ ಎಂಡಿ ವೀರೇಶ, ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕಿ ವಾಸಂತಿ ಉಪ್ಪಾರ, ಎಎಸ್ಪಿ ಮಲ್ಲೇಶ ದೊಡ್ಮನಿ, ಮಾಜಿ ಮೇಯರ್ ಎಸ್.ಟಿ.ವೀರೇಶ, ಜೊಳ್ಳಿ ಗುರು, ತಂಜುಮಿನ್ ಸಮಿತಿಯ ಶಹನವಾಜ್ ಖಾನ್, ಸಾಬೀರ್ ಅಲಿ ಖಾನ್, ಟೈಲ್ಸ್ ಜಬೀ, ಐಟಿಐ ಜಬೀ, ವೈ.ಜಬೀ ಇತರರು ಇದ್ದರು.

.......................

ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ನಿಗಾ ವಹಿಸಿ

ದುಗ್ಗಮ್ಮನ ಜಾತ್ರೆ ಮುಗಿಯುವವರೆಗೂ ಪೊಲೀಸ್ ಇಲಾಖೆಯು ಫೇಸ್‌ ಬುಕ್‌, ವಾಟ್ಸಪ್ ಸೇರಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಬೇಕು ಅಥವಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಸೌಹಾರ್ದತೆಯಿಂದ ಹಬ್ಬ ಮಾಡುತ್ತಾ ಬಂದಿದ್ದೇವೆ. ಈಚೆಗೆ ಕೆಲ ಕಲುಷಿತ ಮನಸ್ಸಿನ ವ್ಯಕ್ತಿಗಳು ಪ್ರಚೋದನೆ ಪೋಸ್ಟ್, ಮಾತುಗಳಿಂದ ಸಮಾಜದಲ್ಲಿ ಸೌಹಾರ್ದತೆ ಕದಡುತ್ತಿದ್ದಾರೆ. ಹಬ್ಬ ಮುಗಿಯುವವರೆಗೂ ಸೋಷಿಯಲ್ ಮೀಡಿಯಾ ಪೊಲೀಸ್ ಇಲಾಖೆ ನಿಯಂತ್ರಣದಲ್ಲಿರಲಿ. ಯಾಕೆಂದರೆ ಕುರಿ ತಲೆ ಕಡಿಯುವ ಜಾಗದಲ್ಲಿ ಮನುಷ್ಯನ ತಲೆ ತೋರಿಸುವ ಜನರೂ ಇದ್ದಾರೆಂದು ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ.ಉಮೇಶ ಹೇಳುತ್ತಿದ್ದಂತೆ ಅಧಿಕಾರಿಗಳು, ವಿವಿಧ ಸಮುದಾಯದ ಮುಖಂಡರಾದಿಯಾಗಿ ಇಡೀ ಸಭೆ ನಗೆಗಡಲಲ್ಲಿ ತೇಲಾಡಿತು.