ದುಂಡಳ್ಳಿ ಗ್ರಾ.ಪಂ.ಆಡಳಿತ ಮಂಡಳಿ ಸಾಮಾನ್ಯ ಸಭೆ

| Published : Jan 25 2024, 02:02 AM IST

ಸಾರಾಂಶ

ಸಭೆ ಪ್ರಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ನಂತರ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿ ರಚನೆಗೊಂಡ ನಂತರ ನಿಯೋಗ ಹಕ್ಕು ಪತ್ರ ವಿತರಣೆ ಕುರಿತಾಗಿ ಅರಣ್ಯ ಸಚಿವರಿಗೆ ಮನವಿ ಪತ್ರ ನೀಡಿ ಬರುವಂತೆ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾ.ಪಂ.ಆಡಳಿತ ಮಂಡಳಿ ಸಾಮಾನ್ಯ ಸಭೆ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಸಭೆ ಪ್ರಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಇತ್ತೀಚೆಗೆ ನಡೆದ ಗ್ರಾ.ಪಂ.ಯ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದುಂಡಳ್ಳಿ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ಹಕ್ಕು ಪತ್ರ ವಿತರಣೆಗೆ ಸಂಬಂಧ ಪಟ್ಟಂತೆ ಗ್ರಾ.ಪಂ.ಯು ಅರಣ್ಯ ಹಕ್ಕು ಸಮಿತಿ ರಚಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಸದಸ್ಯ ದೇವರಾಜ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಆಯಿಷ ಬಾನು ಅರಣ್ಯ ಹಕ್ಕು ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗಿದೆ ಎಂದರು. ನಂತರ ಸಭೆಯಲ್ಲಿ ಅರಣ್ಯ ಹಕ್ಕು ಸಮಿತಿ ರಚನೆಗೊಂಡ ನಂತರ ನಿಯೋಗ ಹಕ್ಕು ಪತ್ರ ವಿತರಣೆ ಕುರಿತಾಗಿ ಅರಣ್ಯ ಸಚಿವರಿಗೆ ಮನವಿ ಪತ್ರ ನೀಡಿ ಬರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾ.ಪಂ.ಅನುದಾನದ ಕೊರತೆಯಿಂದ ನಮ್ಮ ಗ್ರಾ.ಪಂ.ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಪೂರ್ಣಿಮಾ ಕಿರಣ್ ಪ್ರಸ್ತಾಪಿಸಿದರು. ಸದಸ್ಯ ದೇವರಾಜ್ ವಿಷಯ ಪ್ರಸ್ತಾಪಿಸಿದ ನಮ್ಮ ಗ್ರಾ.ಪಂ.ವತಿಯಿಂದ ಗ್ರಾಮಗಳಲ್ಲಿ ಎಲ್‍ಇಡಿ ಮತ್ತು ಸೋಲಾರ್ ದೀಪವನ್ನು ಅಳವಡಿಸುವ ಅಗತ್ಯ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಅಮೃತ ಗ್ರಾಮದಲ್ಲಿ ಬಂದಿದ್ದ ಹಣ ಎಲ್ಲಿ ಹೋಯಿತು ಎಂದು ಸದಸ್ಯ ದೇವರಾಜ್ ಆರೋಪಿಸಿದರು. ಈ ಕುರಿತು ತನಿಖೆಯಾಗಬೇಕೆಂದು ಉಳಿದ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಹಿಂದಿನ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಅಮೃತ ಗ್ರಾಮ ಯೋಜನೆಯಿಂದ ಬಂದ ಹಣವನ್ನು ನೀರುಗಂಟಿ ಉದ್ಯೋಗಿಗಳ ವೇತನಕ್ಕೆ ಬಳಕೆಯಾಗಿತ್ತು. ಅಷ್ಟೆ ಅಲ್ಲದೆ ಬಳಕೆ ಮಾಡಿದ ಪ್ರತಿಯೊಂದು ವೆಚ್ಚಕ್ಕೆ ಸಂಬಂಧಿಸಿದ ಪ್ರತಿಯೊಂದು ದಾಖಲಾತಿಗಳು ಸಹ ಇದೆ ಆದರೂ ಆರೋಪಿಸುತ್ತೀರಿ. ಈ ಸಂಬಂಧ ತನಿಖೆ ನಡೆಸಿ ಎಂದು ಪ್ರತಿಕ್ರಿಯಿಸಿದರು.

ವೈಯುಕ್ತಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ಸದಸ್ಯ ಡಿ.ಬಿ. ಬೋಜಪ್ಪ ಅವರು ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ನಿತಿನ್, ಪೂರ್ಣಿಮಾ ಕಿರಣ್ , ಮನುಕುಮಾರ್ ಅವರ ಜೊತೆ ವಾಗ್ವಾದಕ್ಕಿಳಿದರು. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಪಿಡಿಒ ಆಯಿಷಾ ಬಾನು ಎಲ್ಲಾರನ್ನು ಸಮಾಧಾನ ಪಡಿಸಿದರು. ವಾಗ್ವಾದ ನಿಲ್ಲಲಿಲ್ಲ ಕೊನೆಗೆ ಈ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.