ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣದಲ್ಲಿ ನೂತನವಾಗಿ ಶ್ರೀ ದುರ್ಗಾಲಕ್ಷ್ಮೀ ದೇವಸ್ಥಾನವನ್ನು ಅಂದಾಜು 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿದೆ. ದುರ್ಗಾಲಕ್ಷ್ಮೀ ದೇವಿಯ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಡಿ. 21 ರಿಂದ 25 ರ ವರೆಗೆ ನಡೆದು ಲೋಕಾರ್ಪಣೆಗೊಳ್ಳಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ.ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರವು 1992 ಮೇ 8 ರಂದು ಸ್ಥಾಪನೆಗೊಂಡ ನಂತರದ ದಿನಗಳಲ್ಲಿ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ, ಶ್ರೀಕನ್ನಿಮೂಲ ಗಣಪತಿ ಹಾಗೂ ನೈವೇದ್ಯ ಕೊಠಡಿ ಮತ್ತು ದೇವಸ್ಥಾನದ ಕಚೇರಿ ನಿರ್ಮಿಸಲಾಗಿತ್ತು. ಅದರಂತೆ ದುರ್ಗಾ ದೇವಿಯ ದೇವಸ್ಥಾನವನ್ನು ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಶ್ರೀದುರ್ಗಾಲಕ್ಷ್ಮೀ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ ಕಳೆದ 8 ತಿಂಗಳ ಹಿಂದೆ ಪುತ್ತೂರಿನ ಜಗನಿವಾಸ್ ರಾವ್ ರವರು ಭೂಮಿ ಪೂಜೆ ಶಿಲಾನ್ಯಾಸವನ್ನು ನೆರವೇರಿಸಿದರು.
ಪುತ್ತೂರಿನ ಶಿಲ್ಪಿಗಳಾದ ಕೃಷ್ಣಪ್ರಸಾದ್ ಅವರು ಶಿಲ್ಪಿ ಕಾರ್ಯವನ್ನು ನಿರ್ವಹಿಸುವ ಮೂಲಕ ದೇವಸ್ಥಾನವು ಜೀರ್ಣೋದ್ಧಾರಕ್ಕೆ ಸನ್ನದ್ಧವಾಗಿದೆ. ಊರಿನ ಭಕ್ತಾದಿಗಳು ಮತ್ತು ಸುತ್ತ ಮುತ್ತಲಿನ ದಾನಿಗಳ ಸಹಾಯದಿಂದ ಸರಿಸುಮಾರು 18 ರಿಂದ 20 ಲಕ್ಷ ರು. ವೆಚ್ಚದಲ್ಲಿ ದೇವಿಯ ಆಲಯ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ ಎಂದು ದೇವಸ್ಥಾನ ಸಮಿತಿ ಬಿ.ಎಂ.ಸುರೇಶ್ ಅವರು ತಿಳಿಸಿದರು.21ರಿಂದ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂಧನ್ ತಂತ್ರಿ ಅವರ ನೇತೃತ್ವದಲ್ಲಿ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯವು ವೈದಿಕ ಧಾರ್ಮಿಕ, ವಿಧಿ ವಿಧಾನ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ.
22 ರಂದು ಬೆಳಗ್ಗೆ 4 ಗಂಟೆ ಗಣಪತಿ ಹೋಮ, ತಿಲಾಹೋಮ, ಸಾಯುಜ್ಯಪೂಜೆ ಸಂಜೆ 6 ಗಂ. ಪ್ರಸಾದ ಬಿಂಬ ಪರಿಗ್ರಹ, ಜಲಾದಿವಾಸ ಪುಣ್ಯಹಃ, ಪ್ರಸಾದಶುದ್ಧಿ, ಅಸ್ತ ಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ , ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ.23 ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, ತ್ರಿಕಾಲ ಪೂಜೆ ಪುಣ್ಯಹಃ, ಮಧ್ಯಾಹ್ನ ಪೂಜೆ ಮಹಾಮಂಗಳಾರತಿ, ಸಂಜೆ ಗಂಟೆ ಸ್ಥಳ ಶುದ್ಧಿ, ತ್ರಿಕಾಲ ಪೂಜೆ, ಅತ್ತಾಯ ಪೂಜೆ ಮಹಾ ಮಂಗಳಾರತಿ.
24 ಬೆಳಗ್ಗೆ 6 ಗಂಟೆಗೆ ಗಣಪತಿಹೋಮ, ಶ್ರೀ ಅಯ್ಯಪ್ಪಸ್ವಾಮಿಗೆ ತತ್ವಹೋಮ, ತತ್ವಕಲಶ ಪೂಜೆ, ತತ್ವ ಕಲಶಾಭಿಷೇಕ, ಶ್ರೀ ಭಗವತಿಯ ಶಯ್ಯಾ ಪೂಜೆ, ನಿದ್ರಾ ಕಲಶ ಪೂಜೆ, ಮಧ್ಯಾಹ್ನ ಪೂಜೆ ಮಂಗಳಾರತಿ ಸಂಜೆ 6 ಗಂಟೆ ಬಿಂಬ ಶುದ್ಧಿ, ಕಲಶಪೂಜೆ, ಆದಿವಾಸ ಹೋಮ, ಮಂಡಲ ಪೂಜೆ, ಬಿಂಬ ಶುದ್ಧಿ, ಧ್ಯಾನಾಧಿವಾಸಂ, ಅತ್ತಾಯ ಪೂಜೆ ಮಹಾಮಂಗಳಾರತಿ ನಡೆಯಲಿದೆ.25 ರಂದು ಬೆಳಗ್ಗೆ ಗಣಪತಿ ಹೋಮ, ಆದಿವಾಹನ ವಿಡರ್ತಿ ಪೂಜೆ, ಅಯ್ಯಪ್ಪ ಸ್ವಾಮಿಯ ಬ್ರಹ್ಮಕಲಶ ಪೂಜೆ, ಭಗವತಿಯ ಬ್ರಹ್ಮಕಲಶ ಪೂಜೆ, ಗಣಪತಿಯ ಬ್ರಹ್ಮಕಲಶಾಭಿಷೇಕ, ಶ್ರೀ ಭಗವತಿಯ ಪ್ರಸಾದ ಪ್ರತಿಷ್ಠೆ ಸಮಯ 10ರಿಂದ 12 ರ ಶುಭ ಮುಹೂರ್ತ ಕುಂಭ ಲಗ್ನದಲ್ಲಿ ಶ್ರೀ ದುರ್ಗ ಲಕ್ಷ್ಮೀ ದೇವಿಯ ಪ್ರತಿಷ್ಠೆ, ನಿದ್ರಾಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಶ್ರೀ ಅಯ್ಯಪ್ಪಸ್ವಾಮಿಯ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ.
26 ರಂದು ವಾರ್ಷಿಕ ಮಂಡಲಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪೂವಾಹ್ನ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ, 7.10 ಗಂಟೆಗೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, 7.30 ಗಂಟೆ ಚಂಡೆ ಮೇಳ, 9 ಗಂಟೆ ಶ್ರೀ ಅಯ್ಯಪ್ಪಸ್ವಾಮಿಗೆ ಪಂಚಾಮೃತಾಭಿಷೇಕ, 11.30 ಗಂಟೆ ಅಯ್ಯಪ್ಪಸ್ವಾಮಿಗೆ ಲಕ್ಷಾರ್ಚನೆ, 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಪಲ್ಲಪೂಜೆ ಹಾಗೂ 1 ಗಂಟೆಗೆ ಮಹಾಪೂಜೆ ಮತ್ತು ಗಂಭೀರ ಪಟಾಕಿ ಸಿಡಿಸಲಾಗುವುದು.ವಿಶೇಷ ಪೂಜೆ ಬಿಲ್ವಪತ್ರೆ ಅರ್ಚನೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದೂರ್ವಾಚನೆ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ 6.30 ಕ್ಕೆ ದೀಪಾರಾಧನೆ ಮತ್ತು ಮೆರವಣಿಗೆ 7.30ಕ್ಕೆ ದುರ್ಗಾಪೂಜೆ ನಡೆಯಲಿದ್ದು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಬಿ.ಎಂ.ಸುರೇಶ್ ತಿಳಿಸಿದ್ದಾರೆ.
ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಹಲವು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ. ಅದರಂತೆ ದುರ್ಗಾಲಕ್ಷ್ಮೀ ದೇವಿಯ ದೇವಸ್ಥಾನದ ಕಾಮಗಾರಿ ಆರಂಭಿಸಿದಾಗ ಸಾಕಷ್ಟು ದಾನಿಗಳು ಹಾಗೂ ಭಕ್ತಾದಿಗಳು ಹಲವಷ್ಟು ರೀತಿಯಲ್ಲಿ ದೇಣಿಗೆ ಸಹಾಯಹಸ್ತ ನೀಡಿ ದೇವಿಯ ಆಲಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ್ದಾರೆ. ಲೋಕಾರ್ಪಣೆಗೊಳ್ಳಲು ಸಹಾಯಹಸ್ತ ನೀಡಿದ್ದಾರೆ. ದೇವಸ್ಥಾನ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಗಳನ್ನು ನೀಡಿದ್ದಾರೆ. ಸಮಿತಿಯ ಪದಾಧಿಕಾರಿಗಳ ಅವಿರತ ಪರಿಶ್ರಮ ನೆನಪಿಸಿಕೊಳ್ಳುವಂತಾಗಿದೆ ಎಂದು ಶ್ರೀ ಪುರಂ ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ ಹೇಳಿದರು.ನೂತನ ದೇವಾಲಯ ನಿರ್ಮಾಣ ಕಾರ್ಯಪೂರ್ಣಗೊಂಡು ಮುಂದಿನ ದಿನಗಳಲ್ಲಿ 5 ದಿನಗಳ ಕಾಲ ನಡೆಯಲಿರುವ ಪ್ರತಿಷ್ಠಾಪನಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಪೂಜಾ ಕೈಂಕಾರ್ಯಗಳು ನಡೆಯಲಿದೆ. ಭಕ್ತಾದಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಕಾರ್ಯದರ್ಶಿ ಚಂದ್ರ ಎಂ. ಹಾಗೂ ಖಜಾಂಜಿ ಎಂ.ಆರ್.ಶಶಿಕುಮಾರ್ ತಿಳಿಸಿದ್ದಾರೆ.
ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವಾಲಯದ ಅಭಿವೃದ್ಧಿಗೆ ತನ್ನದೆಯಾದ ಕೊಡುಗೆಯನ್ನು ಸಲ್ಲಿಸುತ್ತಾ ಬಂದಿದೆ. ಅದರಂತೆ 2015 ರಲ್ಲಿ ದುರ್ಗಾಲಕ್ಷ್ಮೀ ದೇವಿಯ ದೇವಸ್ಥಾನದ ನಿರ್ಮಾಣದ ನೀಲಿ ನಕ್ಷೆಯನ್ನು ತಯಾರಿಸಲಾಗಿದ್ದು ಈ ಹಿಂದಿನ ಸಮಿತಿಗಳವರ ಪರಿಶ್ರಮದ ಫಲವಾಗಿ ಈ ದೇವಾಲಯ ನಿರ್ಮಾಣ ಭದ್ರ ಬುನಾದಿಯನ್ನು ಹಾಕಿಕೊಡುವ ಮೂಲಕ ಇದೀಗ ಸುಂದರ ದುರ್ಗಾಲಕ್ಷ್ಮೀ ದೇವಾಲಯವು ನಿರ್ಮಾಗೊಂಡು ಲೋಕಾರ್ಪಣೆಗೆ ಸನ್ನದ್ಧಗೊಂಡಿರುವುದು ಆಶಾದಾಯಕ ವಿಚಾರ ಎಂದು ನಿಕಟಪೂರ್ವ ಅಧ್ಯಕ್ಷ ಸುರೇಶ್ ಗೋಪಿ ತಿಳಿಸಿದರು.