ಮೂಲ್ಕಿ: ಸುರತ್ಕಲ್‌ ನ ಕಾನ-ತೋಕೂರು-ಜೋಕಟ್ಟೆ ರಸ್ತೆ ದುರಸ್ತಿಗೆ ನಾಗರಿಕರು ಹಲವು ವರ್ಷಗಳಿಂದ ಆಗ್ರಹಿಸುತ್ತಾ ಬರುತ್ತಿದ್ದರೂ ಯಾವುದೇ ಅಧಿಕಾರಿ, ಎಂಆರ್‌ ಪಿಎಲ್‌, ಎಂಎಸ್‌ ಇಝೆಡ್‌ನಂತ ಕಂಪನಿಗಳು ಸ್ಪಂದಿಸುತ್ತಿಲ್ಲ. ಮನಪಾ, ಎಂಆರ್‌ಪಿಎಲ್‌, ಎಂಎಸ್‌ಇಝೆಡ್‌ ಸೇರಿದಂತೆ ಜನಪ್ರತಿನಿಧಿಗಳು ಈ ರಸ್ತೆ ನಮ್ಮದಲ್ಲ ಎಂದು ಸಬೂಬು ಹೇಳುತ್ತಿದ್ದಾರೆಂದು ಡಿವೈಎಫ್‌ ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹೇಳಿದರು. ದುರಸ್ತಿಯಾಗದೆ ಸಂಪೂರ್ಣ ಹದಗೆಟ್ಟಿರುವ ಸುರತ್ಕಲ್‌ನ ಕಾನ-ತೋಕೂರು-ಜೋಕಟ್ಟೆ ಮುಖ್ಯ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವಂತೆ ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ, ಆಟೊರಿಕ್ಷಾ ಚಾಲಕರ ಸಂಘ ಸಿಐಟಿಯು, ಡಿಬೈಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಕಾನ ಜಂಕ್ಷನ್ ನಲ್ಲಿ ರಸ್ತೆ ತಡೆದು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸುರತ್ಕಲ್‌ ಭಾಗದ ಎಲ್ಲ ರಸ್ತೆಗಳು ನಾಗರಿಕರ ಹೋರಾಟಗಳಿಂದ ಮಾತ್ರ ದುರಸ್ತಿಯಾಗಿದೆ. ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅಪಘಾತಗಳಿಗೆ ರಸ್ತೆಯನ್ನು ದುರಸ್ತಿ ಮಾಡದವರನ್ನೂ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೂ ಪ್ರಕರಣಗಳನ್ನು ದಾಖಲಿಸಬೇಕು. 15ದಿನಗಳ ಒಳಗಾಗಿ ರಸ್ತೆ ದುರಸ್ತಿ ಮಾಡದಿದ್ದರೆ, ಈ ರಸ್ತೆಯನ್ನು ಒಂದು ದಿನ ಸಂಪೂರ್ಣ ಮುಚ್ಚಿ ಪ್ರತಿಭಟಿಸಲಾಗುವುದು. ಅದಕ್ಕೂ ಬಗ್ಗದಿದ್ದರೆ ನೇರ ಎಂಆರ್‌ಪಿಎಲ್‌, ಎಂಎಸ್‌ಇಝೆಡ್‌ ಎದುರು ನಾಗರಿಕರೊಂದಿಗೆ ಬೃಹತ್‌ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದರು.ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆಗಳ ಅವ್ಯವಸ್ಥೆಯಿಂದ ಅತಿ ಹೆಚ್ಚಿನ ಅಪಘಾತಗಳು ನಡೆಯುತ್ತಿದ್ದು, ಮಂಗಳೂರು ಉತ್ತರ ಕ್ಷೇತ್ರ ಕನಿಷ್ಟ ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಇಲ್ಲಿನ ಜನಪ್ರತಿನಿಧಿಗಳು, ಸರ್ಕಾರಗಳು ಜನರ ಪರವಾಗಿಲ್ಲ. ಶಾಸಕರು ವಿಧಾನಸೌಧದಲ್ಲಿ ಕ್ಷೇತ್ರದ ಅಭಿವೃದ್ಧಿ ಬಗೆಯಾಗಲಿ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತೆತ್ತುತ್ತಿಲ್ಲ. ಕ್ಷೇತ್ರದಲ್ಲಿ ಅವರ ಸಾಧನೆ ಶೂನ್ಯ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಉಪಾಧ್ಯಕ್ಷ ಲಿಗೋರಿ ಜಾರ್ಜ್, ಡಿವೈಎಫ್ಐ ನಗರ ಕಾರ್ಯದರ್ಶಿ ತಯ್ಯಿಬ್‌ ಬೆಂಗ್ರೆ, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಬಷೀರ್ ಮತ್ತಿತರರು ಮಾತನಾಡಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಅಬೂಬಕ್ಕರ್ ಬಾವ ಜೋಕಟ್ಟೆ, ಇಕ್ಬಾಲ್ ಜೋಕಟ್ಟೆ, ಬಿ.ಕೆ. ಮಸೂದ್, ಅಝ್ಮಲ್ ಅಹ್ಮದ್, ಶ್ರೀನಾಥ್ ಕುಲಾಲ್, ಜಗದೀಶ್, ಅಬ್ದುಲ್ ರಹೀಮ್, ಅಬೂಬಕ್ಕರ್ ಕೆ.ಪಿ., ಫ್ರಾನ್ಸಿಸ್ ಡಿಸೋಜಾ, ಮುಸ್ತಫಾ ಒಟ್ಟೆಕಾಯರ್, ಲಕ್ಸ್ಮಿಶ ಅಂಚನ್, ಹಂಝ ಮೈಂದಗುರಿ, ಸುಧೀರ್ ಕೋಡಿಕೆರೆ, ಐ. ಮುಹಮ್ಮದ್, ಇಬ್ರಾಹಿಂ ಹಳೆಮನೆ, ಹನೀಫ್ ಕುಳಾಯಿ, ನವಾಝ್ ಕುಳಾಯಿ, ಸಿರಾಜ್ ಮೈಂದಗುರಿ,‌ ರಾಜಾ ಕಾನ, ಶೀಲಾ ಡಿಸೋಜಾ, ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.