ಕ್ಯಾನ್ಸರ್ ಆರಂಭಿಕ ಪತ್ತೆಯಿಂದ ಜೀವ ರಕ್ಷಣೆ: ಡಾ.ಫಾರುಕ್

| Published : Oct 08 2024, 01:06 AM IST

ಸಾರಾಂಶ

ಬಡಜನರಿಗೆ ರಿಯಾಯಿತಿ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ನಿರ್ಧಾರ ಮಾಡಲಾಗಿದೆ. ಸಾರ್ವಜನಿಕರು ಚಿಕಿತ್ಸಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಆಸ್ಪತ್ರೆ ಮುಖ್ಯಸ್ಥ ಡಾ. ಫಾರುಕ್ ಮನ್ನೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ ಬರುತ್ತದೆ. ಪ್ರಪಂಚದಲ್ಲಿ ಅತ್ಯಂತ ಹಾನಿಕಾರಕವಾಗಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗವು ಒಂದು. ಕ್ಯಾನ್ಸರ್ ರೋಗದ ಆರಂಭಿಕ ಪತ್ತೆಯಿಂದ ಜೀವಗಳನ್ನು ಉಳಿಸಬಹುದು ಎಂದು ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಮನ್ನೂರ ಹೇಳಿದ್ದಾರೆ.

ನಗರದ ರಿಂಗ್ ರಸ್ತೆಯಲ್ಲಿರುವ ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಹಿನ್ನೆಲೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ತಪಾಸಣೆಗೆ ಅಗತ್ಯವುಳ್ಳ ಅತ್ಯಾಧುನಿಕ ಯಂತ್ರೋಪಕರಣಗಳ ಸೌಲಭ್ಯಗಳಿವೆ. ಸೂಜಿ ಪರೀಕ್ಷೆ, ಎಕ್ಸ್ ರೇ, ಸ್ಕ್ಯಾನಿಂಗ್‌, ಮೆಮೊಗ್ರಾಂ ಪರೀಕ್ಷೆಗೊಳಪಟ್ಟು, ಕ್ಯಾನ್ಸರ್‌ ದೃಢಪಟ್ಟಲ್ಲಿ ಕಿಮೊ ಥೆರಪಿ, ವಿಕಿರಣ ಚಿಕಿತ್ಸೆ, ಹಾರ್ಮೋನ್ ಚಿಕಿತ್ಸೆಗಳನ್ನು ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಳನ್ನು ತಜ್ಞ ವೈದ್ಯರಿಂದ ರಿಯಾಯಿತಿ ದರದಲ್ಲಿ ಮಾಡುವ ಮೂಲಕ‌ ಬಡಜನರಿಗೆ ಅನೂಕೂಲ ಮಾಡಲು ನಿರ್ಧರಿಸಲಾಗಿದೆ ಎಂದರು.

ಕ್ಯಾನ್ಸರ್ ತಜ್ಞ ವೈದ್ಯರಾದ ಡಾ.ಅರುಣ ಬರದ್ ಮಾತನಾಡಿ, ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು. ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಕ್ಯಾನ್ಸರ್‌ ಪೀಡಿತರಾಗುತ್ತಿದ್ದಾರೆ. ತೂಕ ಕಡಿಮೆ, ರಕ್ತಸ್ರಾವ, ಸತತವಾಗಿ ಜ್ವರ, ನೆಗಡಿ, ಕೆಮ್ಮು ಇದ್ದಲ್ಲಿ ವೈದ್ಯರಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಿ. ಪ್ರತಿ 6 ತಿಂಗಳಿಗೆ ಒಮ್ಮೆ ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.

ಕ್ಯಾನ್ಸರ್ ತಜ್ಞೆ ಡಾ. ಸಮಯ್ಯ ಸನಾ ಮಾತನಾಡಿ, ಸ್ತನದ ಕ್ಯಾನ್ಸರ್‌ನ ಮೊದಲ ಲಕ್ಷಣವೆಂದರೆ ಸ್ತನದ ಯಾವುದೇ ಭಾಗದಲ್ಲಿ ರೂಪುಗೊಳ್ಳುವ ಗಡ್ಡೆ. ಮ್ಯಾಮೊಗ್ರಾಮ್ ಪರೀಕ್ಷೆಯ ಮೂಲಕ ಸ್ತನದ ಗಡ್ಡೆ ರೋಗಲಕ್ಷಣಗಳನ್ನು ದೊಡ್ಡದಾಗುವ ಮೊದಲು ಪತ್ತೆಹಚ್ಚಬಹುದು ಎಂದರು.

ವೈದ್ಯರಾದ ಡಾ. ಮುಜ್ಜಮಿಲ್, ಡಾ. ರಿಜ್ವಾನ, ಶೋಭಾ ಮಠಪತಿ ಸೇರಿದಂತೆ ಆಸ್ಪತ್ರೆಯ ‌ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸ್ತನದ ಕ್ಯಾನ್ಸರ್ ಇದೆಯೇ ಎಂಬುದನ್ನು ಮಹಿಳೆಯರು ಸ್ವತಃ ತಮ್ಮ ಸ್ತನ ಪ್ರದೇಶದಲ್ಲಿ ಪರೀಕ್ಷಿಸಿಕೊಳ್ಳಿ. ಮೂವತ್ತು ವರ್ಷ ಆಗಿರುವ ಮಹಿಳೆಯರು ಮುಟ್ಟಿನ ನಂತರ ಪ್ರತಿ ತಿಂಗಳಿಗೊಮ್ಮೆ ಸ್ನಾನದ ಸಮಯದಲ್ಲಿ ಒಂದು ಕೈಯನ್ನು ಮೇಲೆತ್ತಿ ಇನ್ನೊಂದು ಕೈಯಿಂದ ಸ್ತನದಲ್ಲಿ ಗಡ್ಡೆ ಇದೆಯೇ ಎಂಬುದನ್ನು ನಿಧಾನವಾಗಿ ಪರೀಕ್ಷೆ ಮಾಡಿಕೊಳ್ಳಬೇಕು. ಕನ್ನಡಿ ಮುಂದೆ ನಿಂತುಕೊಂಡು ಈ ಪರೀಕ್ಷೆಯನ್ನು ಮಾಡಿಕೊಳ್ಳಬಹುದು.

- ಡಾ. ಸುಮಯ್ಯ ಸನಾ, ಕ್ಯಾನ್ಸರ್ ತಜ್ಞರು, ಮಣ್ಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಕಲಬುರಗಿ