ಸಾರಾಂಶ
ಮೇರಿ ಮಾತೆಯ ದೇವಾಲಯದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನವನ್ನು ಸಾರುವ ಈಸ್ಟರ್ ಹಬ್ಬವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೇರಿಮಾತೆಯ ದೇವಾಲಯದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನವನ್ನು ಸಾರುವ ಈಸ್ಟರ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ದೇವಾಲಯದ ಧರ್ಮ ಗುರುಗಳಾದ ಜ್ಞಾನಪ್ರಕಾಶ್ ರವರು ಮೇಣದ ಬತ್ತಿಯನ್ನು ಆಶೀರ್ವದಿಸಿ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು (ಉರಿಸಿ)ಪ್ರಜ್ವಲಿಸಿದರು.
ಗುರುಗಳು ಮೇಣದಬತ್ತಿಯನ್ನು ಹಿಡಿದುಕೊಂಡು ಭಕ್ತರ ನಡುವೆ ತೆರಳಿ ಇದು ಕ್ರಿಸ್ತರ ಜ್ಯೋತಿ ಎಂದು ಉದ್ಗರಿಸಿದಾಗ ಎಲ್ಲ ಭಕ್ತಾದಿಗಳು ದೇವರಿಗೆ ಮಹಿಮೆ ಸಲ್ಲಲಿ ಎಂದು ಜೈಕಾರವನ್ನು ಕೂಗುತ್ತಾ ತಮ್ಮಲ್ಲಿರುವ ಮೇಣದ ಬತ್ತಿಯನ್ನು ಪ್ರಜ್ವಲಿಸಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಲಿ ಪೂಜೆಯನ್ನು ಅರ್ಪಿಸಲಾಯಿತು.ತದನಂತರ ಪುನರುತ್ಥಾನದ ಯೇಸುವಿನ ಪ್ರತಿಮೆಯನ್ನು ಧರ್ಮ ಗುರುಗಳು ಅನಾವರಣಗೊಳಿಸಿದರು. ಈ ಸಂದರ್ಭ ಪಾಲನಾ ಸಮಿತಿಯ ಸದಸ್ಯರು, ಕ್ರೈಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.