ಹುಬ್ಬಳ್ಳಿ:
ಆಕಾಶ ಎಂದೂ ಮುಗಿಯದ ಕುತೂಹಲದ ಕಣಜ. ನಾವು ಯಾರು? ಎಲ್ಲಿದ್ದೇವೆ? ಎಂಬುದನ್ನು ಕಂಡುಕೊಳ್ಳಲು ಮಾತ್ರವಲ್ಲ, ನಾವು ಮನುಷ್ಯರು ಎಷ್ಟು ಸಣ್ಣವರು ಎಂಬುದನ್ನು ಅರಿಯಲು ಭೂಮಿ-ಆಕಾಶಗಳನ್ನು ಅರಿಯಬೇಕು. ಗ್ರಹಣಗಳ ವೀಕ್ಷಣೆ ಮೌಢ್ಯತೆಗಳಾಗದೆ ಖಗೋಳ ಹಬ್ಬಗಳಾಗಲಿ. ಗ್ರಹಣವನ್ನು ಸಂಭ್ರಮಿಸೋಣ ಬನ್ನಿ ಎಂದು ವಿಜ್ಞಾನ ಚಿಂತಕ ಡಾ. ಲಿಂಗರಾಜ ರಾಮಾಪೂರ ಕರೆ ನೀಡಿದರು.ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆಯ ಅರಳೀಕಟ್ಟೆ ತೆರೆದ ವಾಚನಾಲಯ, ಹಿಮಾಲಯನ್ ಸ್ಪೇಸ್ ಸೆಂಟರ್ ಹಾಗೂ ಕಲ್ಪನಾ ಚಾವ್ಲಾ ಖಗೋಳ ಕೇಂದ್ರ ಅಡಿಯಲ್ಲಿ ಮಂಗಳವಾರ ನಡೆದ ರಕ್ತಚಂದನ ಚಂದ್ರಗ್ರಹಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಹಣಗಳ ವೈಜ್ಞಾನಿಕ ಸತ್ಯ ಕೌತುಕಗಳನ್ನು ನಾವು ಆನಂದಿಸಬೇಕೆ ಹೊರತು ಮೌಢ್ಯ ಬಿತ್ತಬಾರದು. ಗ್ರಹಣಗಳನ್ನು ನೋಡುವ ಮೂಲಕ ಇದೊಂದು ಕುತೂಹಲಕಾರಿ, ವಿಸ್ಮಯಕಾರಿ ಮತ್ತು ಮನುಷ್ಯನ ಅರಿವನ್ನು ವಿಸ್ತರಿಸುವ ಘಟನೆ ಎಂಬುದನ್ನು ಸಾರಬೇಕೆಂದರು.ವಿಜ್ಞಾನ ಶಿಕ್ಷಕಿ ಜಯಶ್ರೀ ಎಂ., ಮಕ್ಕಳಿಗೆ ಖಗೋಳ ವಿದ್ಯಮಾನ ಮತ್ತು ಗ್ರಹಣಗಳ ಕುರಿತಾಗಿ ವಿಡಿಯೋ ತೋರಿಸಿ ಮಾತನಾಡಿದರು. ಮುಖ್ಯಶಿಕ್ಷಕಿ ಸುಮನ ತೇಲಂಗ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿದ್ಯಾರ್ಥಿಗಳಿಗೆ ದೂರದರ್ಶಕದ ಸಹಾಯದಿಂದ ಆಕಾಶಕಾಯ ವೀಕ್ಷಿಸುವ ಕುರಿತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ರಕ್ತಚಂದನ ಚಂದ್ರಗ್ರಹಣ ವೀಕ್ಷಿಸಿದರು.
ಈ ವೇಳೆ ಶಿಕ್ಷಕರಾದ ಸುಲೋಚನಾ ಬೆಳಗಾವಿ, ಚಂದ್ರಶೇಖರ ಶೀಪರಮಟ್ಟಿ, ಶಂಭುಲಿಂಗಪ್ಪ ಪೂಜಾರ, ವೀಣಾ ಬಾಗಡಿ, ಬಸಮ್ಮ ಉಪಸ್ಥಿತರಿದ್ದರು.