ಸಾರಾಂಶ
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರು. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ. (ಜಾರಿ ನಿರ್ದೇನಾಲಯ) ಅಧಿಕಾರಿಗಳ ಕಾರ್ಯಾಚರಣೆಯು ಸಿನಿಮೀಯ ರೀತಿಯಲ್ಲಿ ನಡೆದಿದ್ದು, ಮಂಗಳವಾರ ರಾತ್ರಿಯಿಂದಲೇ ದಾಳಿಯ ರೂಪುರೇಷೆ ರೂಪುಗೊಂಡಿತ್ತು.
ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರು, ರಾಯಚೂರು, ಬಳ್ಳಾರಿ ಮತ್ತು ಹೈದರಾಬಾದ್ನಲ್ಲಿ ಕಾರ್ಯಾಚರಣೆ ಕೈಗೊಂಡ ಇಡಿ ಅಧಿಕಾರಿಗಳು ದಾಳಿಗೂ ಮುನ್ನ ಯೋಜಿತ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಇ.ಡಿ. ಅಧಿಕಾರಿಗಳು ಸೇರಿದಂತೆ ದೆಹಲಿ ಸೇರಿದಂತೆ ಇತರೆ ರಾಜ್ಯಗಳ ಅಧಿಕಾರಿಗಳು ಸಹ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ.
ಸ್ಥಳೀಯ ಪೊಲೀಸರಿಗೆ ಯಾವುದೇ ಮುನ್ಸೂಚನೆ ನೀಡದೆ ದೆಹಲಿಯಿಂದ ಕರೆಸಿದ ಸಿಆರ್ಪಿಎಫ್ ಯೋಧರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯ ಪೊಲೀಸರ ನೆರವು ಪಡೆದರೆ ಕಾರ್ಯಾಚರಣೆಯ ಸುಳಿವು ಸೋರಿಕೆಯಾಗಬಹುದೆಂದು ಗೌಪ್ಯವಾಗಿಯೇ ದಾಳಿ ನಡೆಸಲಾಗಿದೆ. ಯಾವ ಅಧಿಕಾರಿಗಳ ತಂಡ ಎಲ್ಲಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಬಗ್ಗೆ ನಿಖರವಾಗಿ ಯೋಜನೆ ರೂಪಿಸಿ ಶೋಧ ಕಾರ್ಯ ನಡೆಸಲಾಗಿದೆ. ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ನಿವಾಸ, ಕಚೇರಿಗಳ ಮೇಲೆ ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ತೆರಳಿ ಶೋಧ ಪ್ರಾರಂಭಿಸಲಾಯಿತು. ರಾಜ್ಯಾದ್ಯಂತ ನಡೆದ ದಾಳಿಯಲ್ಲಿ 80ಕ್ಕೂ ಹೆಚ್ಚಿನ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಪೊಲೀಸರನ್ನು ವಾಪಸ್ ಕಳುಹಿಸಿದ ಸಿಆರ್ಪಿಎಫ್:
ಪ್ರಕರಣ ಸಂಬಂಧ ದಾಳಿ ವೇಳೆ ನಾಗೇಂದ್ರ ಅವರ ನಿವಾಸಕ್ಕೆ ಸ್ಥಳೀಯ ಪೊಲೀಸರು ತೆರಳಿದ್ದರು. ಆದರೆ, ಭದ್ರತೆಗೆ ನಿಯೋಜನೆಗೊಂಡಿದ್ದ ಸಿಆರ್ಪಿಎಫ್ ಯೋಧರು, ಪೊಲೀಸರನ್ನು ವಾಪಸ್ ಕಳುಹಿಸಿದರು. ಪೊಲೀಸರು ತಮ್ಮ ಗುರುತಿನ ಚೀಟಿ ತೋರಿಸಿದರು ಸಹ, ‘ನಿಮ್ಮನ್ನು ಯಾರು ಇಲ್ಲಿಗೆ ಬರಲು ಹೇಳಿದ್ದು?’ ಎಂದು ಹೇಳಿ ಕಳುಹಿಸಿದರು ಎಂದು ಹೇಳಲಾಗಿದೆ. ಮಾಹಿತಿ ಸೋರಿಕೆ ಸಾಧ್ಯತೆ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.