ಸಾರಾಂಶ
ಹರಪನಹಳ್ಳಿ: ಇಂತದ್ದೆ ಓದಿ ಎಂದು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಅವರ ಅಭಿರುಚಿಗನುಗುಣವಾಗಿ ಶಿಕ್ಷಣ ಕೊಡಿಸಿ ಎಂದು ಇಲ್ಲಿಯ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಪೋಷಕರಿಗೆ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ತಮ್ಮ ಮಕ್ಕಳಂತೆ ಶಾಲೆಯಲ್ಲಿರುವ ಮಕ್ಕಳನ್ನು ನೋಡಿದರೆ ಇಂತಹ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದ ಅವರು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ ಮಾತನಾಡಿ, ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರಿ ನೌಕರರ ಸಂಘ ಕೆಲಸ ಮಾಡುತ್ತಿದೆ. ಸಂಘಗಳು ಸಮಾಜಮುಖಿ ಕೆಲಸ ಮಾಡಬೇಕು ಎಂದರು.ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಂಘಟನೆಯಲ್ಲಿ ಶಕ್ತಿ ಇದೆ. ಮಕ್ಕಳನ್ನು ಹುರಿದುಂಬಿಸುವ ಕೆಲಸ ಇಂತಹ ವೇದಿಕೆ ಮೂಲಕ ಆಗಬೇಕು. ಸರ್ಕಾರಿ ನೌಕರರ ಸಂಘವು ತಾಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಇಒ ಪ್ರಕಾಶ ಅವರು, ತಾಲೂಕಿನಲ್ಲಿ ಈ ಬಾರಿ ಶಾಲೆಗಳ ಅಭಿವೃದ್ಧಿಗೆ ತಾಪಂ ವತಿಯಿಂದ ₹2.30 ಕೋಟಿ ಅನುದಾನ ನೀಡಿದ್ದೇವೆ ಎಂದರು.ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಸರ್ಕಾರಿ ನೌಕರರು ಒತ್ತಡದಲ್ಲಿಯೇ ಜೀವನ ನಡೆಸುತ್ತಲಿದ್ದು, ತಾಲೂಕಿನಲ್ಲಿ ನಾಲ್ಕು ಸಾವಿರ ಹುದ್ದೆಗಳಿಗೆ ಕೇವಲ 2900 ನೌಕರರು ಕೆಲಸ ನಿರ್ವಹಿಸುತ್ತಿದ್ದು, ಖಾಲಿ ಹುದ್ದೆಗಳಿದ್ದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ಪುರಸಭಾ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಪದ್ಮಲತಾ, ನೌಕರರ ಸಂಘದ ಅಧ್ಯಕ್ಷ ಎಸ್. ರಾಮಪ್ಪ, ದೇವೇಂದ್ರಗೌಡ ಮಾತನಾಡಿದರು.ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ ಬಾಗಲರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ. ರಾಜಶೇಖರ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಚಂದ್ರಮೌಳಿ, ನೌಕರರ ಸಂಘದ ಖಜಾಂಚಿ ಬಿ.ಎಚ್. ಚಂದ್ರಪ್ಪ, ಎ. ಸುಮಾ, ಪದ್ಮರಾಜ ಜೈನ್, ಶಿಕ್ಷಕರ ಸಂಘದ ಕಾರ್ಯದರ್ಶಿ ನಟರಾಜ, ಎಂ. ರಮೇಶ, ಎಂ. ಪ್ರಭು, ಎಎಸ್ಎಂ ಗುರುಪ್ರಸಾದ್, ಅರ್ಜುನ ಪರಸಪ್ಪ, ಪಿ. ಗಣೇಶ, ಬಂದಮ್ಮ, ರತ್ನಮ್ಮ, ಕತೆಗಾರ ಮಂಜಣ್ಣ, ಸುಬ್ಬಣ್ಣ, ಪಿ. ಅಂಜಿನಪ್ಪ, ಸೊಪ್ಪಿನ ಹನುಮಂತಪ್ಪ, ಉಸ್ಮಾನ್, ಬಿ. ಕೊಟ್ರೇಶ ಬುಳ್ಳನ ಗೌಡ ಉಪಸ್ಥಿತರಿದ್ದರು.