ಸಾರಾಂಶ
ಕೋಲಾರ: ಎಲ್ಲ ದಾನಗಳಿಗಿಂತ ವ್ಯಕ್ತಿಯೊಬ್ಬನಿಗೆ ನೀಡುವ ವಿದ್ಯಾದಾನವು ಶ್ರೇಷ್ಠವಾದುದಾಗಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಅಭಿಪ್ರಾಯಪಟ್ಟರು. ತಾಲೂಕಿನ ಖಾದ್ರಿಪುರ ಅಮರ ಜ್ಯೋತಿ ಪಬ್ಲಿಕ್ ಶಾಲೆಯ ೧೫ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಉನ್ನತ ದರ್ಜೆಯ ಶಿಕ್ಷಣವನ್ನು ಕಡಿಮೆ ದರದಲ್ಲಿ ನೀಡುತ್ತಿರುವ ಶಾಲಾ ಆಡಳಿತದ ಕಾರ್ಯವನ್ನು ಶ್ಲಾಘಿಸಿದರು. ಶೈಕ್ಷಣಿಕ ಸಂಸ್ಥೆ ಕಟ್ಟಿ ಬೆಳೆಸಬೇಕಾದರೆ ಎಲ್ಲರ ಶ್ರಮವಿದೆ, ನಮ್ಮದು ಶೈಕ್ಷಣಿಕ ಸಂಸ್ಥೆಯಿದ್ದು, ಅದರ ಸಾಧಕ- ಬಾಧಕಗಳು ನನಗೆ ತಿಳಿದಿವೆ. ವಿದ್ಯಾಸಂಸ್ಥೆ ಬೆಳೆಯಲು ಶಿಕ್ಷಕರ ಸಹಕಾರ ಅತಿ ಮುಖ್ಯ ಎಂದರು. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವಾತಾವರಣ ನಿರ್ಮಿಸಿರುವ ಶಾಲೆಯು, ಇನ್ನೂ ಉತ್ತಂಗಕ್ಕೆ ಬೆಳೆಯಲಿ ಎಂದು ಆಶಿಸಿದರು. ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಹಿರಿಯ ವಕೀಲ ಕೆ.ವಿ.ಶಂಕರಪ್ಪ, ಬಿಇಒ ಕೆ.ಉಮಾ, ಅಮರಜ್ಯೋತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಿ.ಮುನಿಯಪ್ಪ, ನಗರಸಭಾ ಸದಸ್ಯ ರಾಕೇಶ್, ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಮುಖಂಡ ನಾಗಭೂಷಣ್, ಬನಕನಹಳ್ಳಿ ನಟರಾಜ್, ಶಾಲೆಯ ಕಾರ್ಯದರ್ಶಿ ಕೆ.ಎನ್.ಅಮರಾವತಿ ಡಿ.ಮುನಿಯಪ್ಪ, ಖಜಾಂಚಿ ಕೆ.ಎನ್.ಮೋಹನ್, ಪ್ರಾಂಶುಪಾಲರು ಎನ್.ಶ್ರೀನಿವಾಸ ರೆಡ್ಡಿ, ಮುಖ್ಯೋಪಾಧ್ಯಾಯನಿ ಕೆ.ಎಂ.ಸೌಮ್ಯ ಇದ್ದರು.