ದೇವನೂರು ಸರ್ಕಾರಿ ಶಾಲೆಯಲ್ಲಿ ₹50 ಲಕ್ಷ ವೆಚ್ಚದ ಶಾಲಾ ಕೊಠಡಿಗಳ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶಿಕ್ಷಣ ಕೇವಲ ಸರ್ಕಾರಿ ನೌಕರಿಗಲ್ಲ. ಬದುಕು ರೂಪಿಸಿಕೊಂಡು ಉತ್ತಮ ಪ್ರಜೆಯಾಗಲು ಬೇಕಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವನೂರು ಸರ್ಕಾರಿ ಶಾಲೆಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಶಾಲಾ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ ಆಸ್ತಿ ಎಷ್ಟಿದ್ದರೆ ಏನು ಪ್ರಯೋಜನ. ಆಸ್ತಿ ಕಳೆಯಬಹುದು. ಆದರೆ, ವಿದ್ಯೆಯನ್ನು ಕಳೆಯಲು ಸಾಧ್ಯವಿಲ್ಲ ಯಾರು ದೋಚಲು ಸಾಧ್ಯವಿಲ್ಲ ಎಂದು ಹೇಳಿದರು.ದೇಶದಲ್ಲಿ ಏಕಕಾಲದಲ್ಲಿ ಯೋಗ ದಿನಾಚರಣೆ ಮಾಡಲಾಗುತ್ತಿದೆ. ಹಾಗಾಗಿ ಪ್ರಪಂಚದ ನೂರಾರು ದೇಶಗಳಲ್ಲಿ ಇಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ಸಾಮಾನ್ಯ ಕುಟುಂಬ ದಲ್ಲಿ ಹುಟ್ಟಿರುವ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 12 ವರ್ಷ ಕಾಲ ಪ್ರಧಾನಿಯಾಗಿದ್ದರು ಎಂದರು.
ದಿನಸಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ನಿಕಟ ಪೂರ್ವ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡಿದ್ದರಿಂದ ಜನರ ಬದುಕು ಸರಿ ಸಮಾನವಾಗಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುವ ಜತೆಗೆ ಬದುಕನ್ನು ಕಟ್ಟಿಕೊಡುತ್ತಿದೆ. ಅಭಿವೃದ್ಧಿಯಲ್ಲೂ ಸರ್ಕಾರ ಹಿಂದೆ ಬಿದ್ದಿಲ್ಲ. ದೇವನೂರು ಕೆರೆ ಏರಿಯನ್ನು ಅಗಲ ಮಾಡಿದ್ದೇವೆ. ಸಖರಾಯಪಟ್ಟಣ ಹೋಬಳಿಯಲ್ಲಿ ಲೋಕೊಪಯೋಗಿ ಇಲಾಖೆ ರಸ್ತೆಗಳಿಗೆ ₹62 ಕೋಟಿ ವೆಚ್ಚದ ಕಾಮಗಾರಿ ಮಾಡಲಾಗಿದೆ. ದೇವನೂರು ಗ್ರಾಪಂ ವ್ಯಾಪ್ತಿಯಲ್ಲಿ ₹3 ಕೋಟಿ ಕಾಮಗಾರಿ ಮಾಡಿದ್ದೇವೆ. ದೇವನೂರು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಎತ್ತಿನಹೊಳೆ ನೀರು ಬೆಳವಾಡಿಕೆರೆ, ಮಾಚೇನಹಳ್ಳಿ ಕೆರೆ, ಕುರುಬರಹಳ್ಳಿ ಕೆರೆ, ದೇವನೂರು ಕೆರೆಯನ್ನು ತುಂಬಿಸಿದ್ದೇವೆ. ಈ ಬಾರಿಯೂ ಕೂಡ ಈ ಕೆರೆಗಳನ್ನು ತುಂಬಿಸುವ ಭರವಸೆ ಇದೆ ಎಂದು ಹೇಳಿದರು.ಮೂಲ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೆ ನೀಡಿ ಶಿಕ್ಷಕರು ನೇಮಕ ಮಾಡಿದರೆ ಬಡವರ ಮನೆಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತದೆ. ಈ ಸದ್ದುದೇಶದಿಂದ ಶಾಲಾ ಕೊಠಡಿ ನಿರ್ಮಿಸಲಾಗಿದೆ ಎಂದರು.
ಭದ್ರ ಉಪ ಕಣಿವೆ ಯೋಜನೆ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. ಈ ಭಾಗದ ಕೆರೆ ತುಂಬಿಸಿ ನೀರು ಕೊಡುವುದು ನಮ್ಮ ಆದ್ಯತೆ ಎಂದು ತಿಳಿಸಿದರು.ರಾಜ್ಯ ಪರಿಸರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ದೇವನೂರು ಗ್ರಾಪಂ ಅಧ್ಯಕ್ಷೆ ದೀಪಾ ದಕ್ಷಿಣಾಮೂರ್ತಿ, ಉಪಾಧ್ಯಕ್ಷ ರವಿಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಸ್. ಮಹಾಲಿಂಗಪ್ಪ, ಉಪಾಧ್ಯಕ್ಷೆ ಭೂಮಿಕಾ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮೋಹನ್ ನಾಯ್ಕ, ಕಡೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.
-- ಕೋಟ್ --ಶಿಕ್ಷಣ, ಆರೋಗ್ಯ ಮತ್ತು ಜನರ ಬದುಕಿಗೆ ಜನಪ್ರತಿನಿಧಿಗಳು ಆದ್ಯತೆ ನೀಡಿ, ಜನರ ಋಣ ತೀರಿಸುವ ಕೆಲಸ ಮಾಡಲೇಬೇಕು.
- ಎಚ್.ಡಿ.ತಮ್ಮಯ್ಯ, ಶಾಸಕ, ಚಿಕ್ಕಮಗಳೂರು