ವ್ಯಾಸಂಗ ಮಾಡಲು ಸಮೀಪದಲ್ಲಿ ಶಾಲೆ ಆಟದ ಮೈದಾನಗಳೊಂದಿಗೆ ಸುಸಜ್ಜಿತವಾದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣವಾಗಿದ್ದು, ಈ ಭಾಗದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯವನ್ನು ಪಡೆದು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಶ್ರೀಮಂಗಲ: ವ್ಯಾಸಂಗ ಮಾಡಲು ಸಮೀಪದಲ್ಲಿ ಶಾಲೆ ಆಟದ ಮೈದಾನಗಳೊಂದಿಗೆ ಸುಸಜ್ಜಿತವಾದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣವಾಗಿದ್ದು, ಈ ಭಾಗದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸರ್ಕಾರದ ಈ ಸೌಲಭ್ಯವನ್ನು ಪಡೆದು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು. ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕುಟ್ಟದಲ್ಲಿ 3.23 ಕೋಟಿ ರು. ಅನುದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಿರುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಬಾಲಕರ ಸುಸಜ್ಜಿತ ವಿದ್ಯಾರ್ಥಿ ವಸತಿ ನಿಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
2024ರ ಜನವರಿ ತಿಂಗಳಲ್ಲಿ ಈ ವಸತಿ ನಿಲಯ ಸ್ಥಾಪನೆಗೆ ಭೂಮಿ ಪೂಜೆ ನಡೆಸಲಾಗಿತ್ತು. 2026ರ ಜೂನ್ ತಿಂಗಳಲ್ಲಿ ಅಂದರೆ ಎರಡೂವರೆ ವರ್ಷದ ನಂತರ ವಸತಿ ನಿಲಯ ನಿರ್ಮಾಣವಾಗಿ ಉದ್ಘಾಟನೆ ಮಾಡಲಾಗುತ್ತಿದೆ ಎಂದರು.ಹೆಚ್ಚು ಬುಡಕಟ್ಟು ಜನಾಂಗ ವಾಸವಿರುವ ಪ್ರದೇಶವಾದ ಕುಟ್ಟ ಮತ್ತು ನಾಗರಹೊಳೆ ಭಾಗದ ವಿದ್ಯಾರ್ಥಿಗಳಿಗೆ ಬಹಳ ಸುಸಜ್ಜಿತವಾಗಿ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಕಟ್ಟಡದ ಕಾಮಗಾರಿ ಸಹ ಗುಣಮಟ್ಟದಿಂದ ಕೂಡಿದೆ ಎಂದು ಭಾವಿಸಿದ್ದೇನೆ. ಇದೇ ಶೈಕ್ಷಣಿಕ ವರ್ಷದಿಂದ ವಸತಿಗೃಹ ಆರಂಭವಾಗುತ್ತಿದೆ. 100 ಮಕ್ಕಳಿಗೆ ಇಲ್ಲಿ ವಸತಿಗೆ ಅವಕಾಶವಿದ್ದು, 24 ಕೊಠಡಿ ಲಭ್ಯವಿದೆ. ಈಗಾಗಲೇ 52 ಮಕ್ಕಳು ಇದ್ದಾರೆ. ಇಲ್ಲಿನ ವಾತಾವರಣ ಸಹ ಸುಂದರವಾಗಿದ್ದು, ಪಕ್ಕದಲ್ಲಿ ಶಾಲೆ ಇದೆ. ವಿಶಾಲ ಆಟದ ಮೈದಾನವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಐಟಿಡಿಪಿ ಜಿಲ್ಲಾಧಿಕಾರಿ ಹೊನ್ನೇಗೌಡ ಮುಂದಿನ ವಾರ ನಿವೃತ್ತಿಯಾಗುತ್ತಿದ್ದು, ನಿವೃತ್ತಿಗೆ ಮೊದಲು ವಸತಿ ಗೃಹವನ್ನು ಅವರ ಆಶಯದಂತೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಅವರು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.ನೆಲ ಮಹಡಿ ಅಲ್ಲದೆ ಮೂರು ಅಂತಸ್ತಿನ ವಸತಿ ನಿಲಯವನ್ನು ಸಂಪೂರ್ಣವಾಗಿ ಶಾಸಕರು ಈ ಸಂದರ್ಭ ವೀಕ್ಷಿಸಿ ಸಂತ್ರಪ್ತಿ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಮಾಜಿ ತಾಪಂ ಸದಸ್ಯ ಪಲ್ವಿನ್ ಪೂಣಚ್ಚ, ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಎಚ್.ವೈ. ರಾಮಕೃಷ್ಣ ಪ್ರಮುಖರಾದ ಮುಕ್ಕಾಟಿರ ನವೀನ್ ತೀತಿರ ಮಂದಣ್ಣ, ಜಿಪಂ ಮಾಜಿ ಸದಸ್ಯ ಬಾನಂಡ ಪ್ರಥ್ವಿ, ಚೊಟ್ಟೆಯಂಡಮಾಡ ವಿಶು, ಅಪ್ಪಚಂಗಡ ಮೋಟಯ್ಯ, ಕೆ. ಬಾಡಗ ಗ್ರಾಪಂ ಮಾಜಿ ಅಧ್ಯಕ್ಷ ಚೆಪ್ಪುಡಿರ ಬೋಪಣ್ಣ, ನಾಲ್ಕೇರಿ ವಲಯ ಕಾಂಗ್ರೆಸ್ ಅಧ್ಯಕ್ಷ ತೀತಿರ ಕಟ್ಟಿ ಕಾರ್ಯಪ್ಪ, ಕೆ. ಬಾಡದ ವಲಯ ಅಧ್ಯಕ್ಷ ಚಿಮ್ಮಣಮಾಡು ರವಿ ನರೇಂದ್ರ, ಶೇಖರ್, ಕೇಚಮಾಡ ಸಿದ್ದು,ರಾಜನ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕೊಡಗು ಜಿಲ್ಲೆಯ ಸಮನ್ವಯ ಅಧಿಕಾರಿ ಹೊನ್ನೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.
