ಸಾರಾಂಶ
ರೈತರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
ಕುಷ್ಟಗಿ:
ತಾಲೂಕಿನಲ್ಲಿ ಕೃಷಿಕ ಸಮಾಜಕ್ಕೆ ಒಂದು ಸ್ವಂತ ಕಟ್ಟಡ ಮಾಡುವ ಗುರಿ ಹೊಂದಿದ್ದೇನೆ. ರೈತರಿಗೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದರು.ಪಟ್ಟಣದ ಕೃಷಿ ಇಲಾಖೆಯ ಕಾರ್ಯಾಲಯದಲ್ಲಿ ನಡೆದ ನೂತನವಾಗಿ ಆಯ್ಕೆಯಾದ ಕೃಷಿಕ ಸಮಾಜದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಕೃಷಿ ಇಲಾಖೆಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡರೆ ಅಲ್ಲಿರುವ ಬೇರೆ ಬೇರೆ ಆಧುನಿಕ ಕೃಷಿ ಪದ್ದತಿಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ. ಅವಕಾಶ ಇದ್ದರೆ ಪ್ರವಾಸ ಹಮ್ಮಿಕೊಳ್ಳೋಣ ಎಂದರು.
ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಶ್ಯಾಮರಾವ ಕುಲಕರ್ಣಿ ಮಾತನಾಡಿ, ನಾವೆಲ್ಲರೂ ರೈತ ಕುಟುಂಬದಿಂದ ಬಂದವರು, ರೈತರ ಸಮಸ್ಯೆಗೆ ಸ್ಪಂದಿಸಿ ಅವರಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ರೈತರಿಗೆ ಸಹಕಾರಿ ಆಗುವ ಅಂಶಗಳ ಕುರಿತು ಚರ್ಚಿಸಬೇಕಿದೆ. ನಮ್ಮ ತಾಲೂಕಿನ ರೈತರು ಉತ್ತಮ ಫಸಲು ಬೆಳೆದು ಅಭಿವೃದ್ಧಿ ಪಥದತ್ತ ಸಾಗಲಿ. ಅದಕ್ಕೆ ನಿಮ್ಮಲ್ಲರ ಸಹಕಾರ ಇರಲಿ ಎಂದರು. ನಂತರ ಎಲ್ಲಾ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ಪಾಟೀಲ್, ವಿ.ಆರ್. ತಾಳಿಕೋಟಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಗಪ್ಪ ಕಡಿವಾಲ, ಗೋಪಾಲರಾವ್ ಕುಲಕರ್ಣಿ, ಸಂಗಯ್ಯ ವಸ್ತ್ರದ, ಶಂಕರಗೌಡ ಪಾಟೀಲ್, ಬಸನಗೌಡ ದಿಡ್ಡಿಮನಿ, ಮಹಾಂತೇಶ ಕರಡಿ, ಶರಣಪ್ಪ ಬಡಿಗೇರ, ಮಲ್ಲಯ್ಯ ಲೈನದ್, ಮನೋಜ್ ಪಟ್ಟಣಶೆಟ್ಟಿ, ದಾವಲಸಾಬ ಬಾವಿಕಟ್ಟಿ ಸೇರಿದಂತೆ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ಕೃಷಿ ಅಧಿಕಾರಿಗಳಾದ ರಾಜಶೇಖರ, ಪ್ರಕಾಶ ತಾರಿವಾಳ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿ ಇದ್ದರು. ರಾಜಶೇಖರ ಸ್ವಾಗತಿಸಿ, ನಿರೂಪಿಸಿದರು.