ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ದೊರಕಿಸಲು ಯತ್ನ: ಸಚಿವ ಎಚ್.ಕೆ. ಪಾಟೀಲ

| Published : Oct 15 2025, 02:07 AM IST

ಲಕ್ಕುಂಡಿಗೆ ಯುನೆಸ್ಕೋ ಸ್ಥಾನಮಾನ ದೊರಕಿಸಲು ಯತ್ನ: ಸಚಿವ ಎಚ್.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಿಷನ್‌ನ ಅಡಿಯಲ್ಲಿ ಕರ್ನಾಟಕ ಸರ್ಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಗಳನ್ನು ಭವಿಷ್ಯೋತ್ತರ ಜಾಗತಿಕ ತಾಣಗಳೆಂದು ಪರಿಗಣಿಸಬೇಕೆಂದು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಗದಗ: ಜಿಲ್ಲೆಯ ಲಕ್ಕುಂಡಿಯನ್ನು ಯುನೆಸ್ಕೋ ಜಾಗತಿಕ ಪಾರಂಪರಿಕ ತಾಣದ ಸ್ಥಾನಮಾನವನ್ನು ದೊರಕಿಸಲು ಕರ್ನಾಟಕ ಸರ್ಕಾರ ಕಾರ್ಯೋನ್ಮುಖವಾಗಿದೆ. ತನ್ಮೂಲಕ ಕರ್ನಾಟಕವನ್ನು ಪಾರಂಪರಿಕ ಪ್ರವಾಸೋದ್ಯಮದ ಮುಂಚೂಣಿ ರಾಜ್ಯವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಮಂಗಳವಾರದಿಂದ ರಾಜಸ್ಥಾನದ ಉದಯಪುರದಲ್ಲಿ (ಅ.14 ಮತ್ತು 15) ನಡೆಯುತ್ತಿರುವ ಪ್ರವಾಸೋದ್ಯಮದ ಹೊಸ ಉಪಕ್ರಮಗಳ ಬಗ್ಗೆ ರಾಜ್ಯ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಮಾತನಾಡಿದರು.

ಜಾಗತಿಕ ಸ್ಪರ್ಧಾತ್ಮಕ ಪ್ರವಾಸೋದ್ಯಮ 50 ತಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಿಷನ್‌ನ ಅಡಿಯಲ್ಲಿ ಕರ್ನಾಟಕ ಸರ್ಕಾರವು ಗದಗ, ಹಂಪಿ, ಮೈಸೂರು ಮತ್ತು ಉಡುಪಿಗಳನ್ನು ಭವಿಷ್ಯೋತ್ತರ ಜಾಗತಿಕ ತಾಣಗಳೆಂದು ಪರಿಗಣಿಸಬೇಕೆಂದು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ.

ಪಾರಂಪರಿಕ ಜಾಗತಿಕ ತಾಣದ ಎಲೆಮರೆಯ ಕಾಯಿಯಂತೆ ಅನರ್ಘ್ಯ ರತ್ನದಂತಹ ತಾಣವಾಗಿರುವ ಗದಗ ಪರಂಪರೆ, ನಿಸರ್ಗ ಮತ್ತು ಸಂಸ್ಕೃತಿಗಳ ಸಮ್ಮಿಲನವಾಗಿ ಪರಿಪಕ್ವವಾದ ಸೌಹಾರ್ದತೆಯನ್ನು ಪಡೆದಿರುವ ಗದಗ ಜಿಲ್ಲೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕೇವಲ 40 ನಿಮಿಷಗಳ ಪ್ರಯಾಣದ ದೂರದಲ್ಲಿದೆ. ಗದಗನಿಂದ ಕೇವಲ 8 ಕಿಮೀ ದೂರದಲ್ಲಿರುವ ಲಕ್ಕುಂಡಿ ಚಾಲುಕ್ಯರ ಶಿಲ್ಪಕಲೆಯ ಬಯಲು ವಸ್ತು ಸಂಗ್ರಹಾಲಯವೆಂದು ಕರೆಯಲ್ಪಡುತ್ತದೆ. 100 ಗಹನವಾದ ಕೆತ್ತನೆಯ ದೇವಾಲಯಗಳು, ಆಳವಾದ ಬಾವಿಗಳು, ಜೈನ ಬಸದಿಗಳು ಮತ್ತು ಪ್ರಾಚೀನ ಯುಗದ ಶಿಲ್ಪಕಲೆಯ ಚಾಣಾಕ್ಷತನವನ್ನು ಪ್ರತಿಬಿಂಬಿಸುವ ಶಿಲಾಶಾಸನಗಳನ್ನು ಹೊಂದಿದೆ.

ಗದಗ ನಗರವು ತ್ರಿಕೂಟೇಶ್ವರ ದೇವಸ್ಥಾನ, ಸರಸ್ವತಿ ದೇವಸ್ಥಾನ ಮತ್ತು ವೀರನಾರಾಯಣ ದೇವಸ್ಥಾನ ಹಾಗೂ ಡಂಬಳದ ದೊಡ್ಡಬಸಪ್ಪನ ದೇವಸ್ಥಾನಗಳು ಮತ್ತು ಪ್ರಾಚೀನ ಕೋಟೆಗಳು ಭಾರತೀಯ ಶಿಲ್ಪಕಲೆಯನ್ನು ಶ್ರೀಮಂತಗೊಳಿಸಿದ ರಾಜಮನೆತನಗಳ ಕಥೆಗಳನ್ನು ವರ್ಣಿಸುತ್ತಿವೆ ಎಂದು ವಿವರಿಸಿದರು.

ಗದುಗಿನ ಭಾರತರತ್ನ ಪಂಡಿತ ಭೀಮಸೇನ್‌ ಜೋಶಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿ, ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ವಿಶ್ವದಲ್ಲಿ ಹಾಸುಹೊಕ್ಕಾಗುವಂತೆ ಮಾಡಿದರು ಎಂದರು.

ಕಳೆದ 2 ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಸವದತ್ತಿ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ, ಅಂಜನಾದ್ರಿ ಬೆಟ್ಟ ಮತ್ತು ಹಂಪಿ, ಮೈಸೂರು, ಬೀದರ ಮತ್ತು ಉಡುಪಿ ಹಾಗೂ ಬೆಂಗಳೂರು ಬಳಿಯ ರೋರಿಕ್‌ ಎಸ್ಟೇಟ್‌ಗಳ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಕಾಲಮಿತಿಗೊಳಪಟ್ಟು ಈ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತಿದೆ. 343 ಕಿಮೀ ಉದ್ದದ ಕರಾವಳಿಯನ್ನು ಕೇಂದ್ರೀಕೃತವಾಗಿಸಿ, ಅಭಿವೃದ್ಧಿಪಡಿಸಿ ಉನ್ನತ ಸ್ಥರದ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿಯನ್ನು ಸಿದ್ದಪಡಿಸುತ್ತಿದೆ ಎಂದರು.

ದೇಶವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಕರ್ನಾಟಕ ಬದ್ಧವಾಗಿದೆ. ಕೇಂದ್ರ ಮತ್ತು ಇತರ ರಾಜ್ಯಗಳ ಸಂಯೋಜನೆಯೊಂದಿಗೆ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮದ ಶಕ್ತಿ ಕೇಂದ್ರವನ್ನಾಗಿಸಲು ಕರ್ನಾಟಕವು ತನ್ನೆಲ್ಲ ಶಕ್ತಿಯನ್ನು ಧಾರೆ ಎರೆಯುತ್ತದೆ ಎಂದರು.ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ಎಲ್ಲ ರಾಜ್ಯದ ಪ್ರವಾಸೋದ್ಯಮ ಸಚಿವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.