ಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ಪಟ್ಟಣದ ವಿವಿಧ ಈದ್ಗಾ ಮೈದಾನಗಳಲ್ಲಿ ಶನಿವಾರ ಮುಸ್ಲಿಂ ಧರ್ಮೀಯರು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕಂಪ್ಲಿಪವಿತ್ರ ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ಪಟ್ಟಣದ ವಿವಿಧ ಈದ್ಗಾ ಮೈದಾನಗಳಲ್ಲಿ ಶನಿವಾರ ಮುಸ್ಲಿಂ ಧರ್ಮೀಯರು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಬೆಳಗ್ಗೆ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಿಗೆ ಆಗಮಿಸಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಪಟ್ಟಣದ ಮುದ್ದಾಪುರ ರಸ್ತೆಯ ಖದೀಮ್ ಸುನ್ನಿ ಈದ್ಗಾ ಮೈದಾನದಲ್ಲಿ ನಡೆದ ಪ್ರಮುಖ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಪಾಷ ಖಾದ್ರಿ ಸಜ್ಜಾದೆ ನಶೀನ್ ದಿವಾನಖಾನೆ ಮಾತನಾಡಿ, ಮಹಮ್ಮದ್ ಪೈಗಂಬರರ ತತ್ವ ಹಾಗೂ ಆದರ್ಶಗಳು ಮಾನವಕುಲಕ್ಕೆ ದಾರಿದೀಪವಾಗಿದ್ದು, ಅವುಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲಾ ಧರ್ಮಗಳ ಜನರು ಪರಸ್ಪರ ಗೌರವ, ಸಹೋದರತ್ವ ಮತ್ತು ಸಾಮರಸ್ಯದಿಂದ ಬದುಕುವುದು ಸಮಾಜದ ಶಾಂತಿಗೆ ಅಗತ್ಯವೆಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಂಪ್ಲಿ, ಕೋಟೆ ಹಾಗೂ ಬೆಳಗೋಡ್ ಅಗಸಿ ಖದೀಮ್ ಜಾಮೀಯಾ ಮಸೀದಿಗಳ ಪದಾಧಿಕಾರಿಗಳು, ಮುತುವಲ್ಲಿಗಳು, ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು.

ಇದಲ್ಲದೆ, ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನದಲ್ಲಿಯೂ ಭಕ್ತಿಭಾವಪೂರ್ಣ ವಾತಾವರಣದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ಶಾಸಕ ಜೆ.ಎನ್. ಗಣೇಶ್ ಅವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಸಮುದಾಯದವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ ಗೌರವ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸೈಯ್ಯದ್ ಷಾಹ್ ಖಾಜಾ ಮೊಹೀದ್ದೀನ್ ಖಾದ್ರಿ, ಸೈಯ್ಯದ್ ಷಾಹ್ ಡಾ. ನೂರ್ ಅಹ್ಮದ್ ಖಾದ್ರಿ, ಸೈಯ್ಯದ್ ಷಾಹ್ ಕರಿಮುಲ್ಲಾ ಖಾದ್ರಿ, ಇಮಾಂ ಹಾಜಿ, ಹಾಫೀಜ್ ಶಿರಾಜುದ್ದೀನ್ ಸೇರಿದಂತೆ ಅನೇಕ ಧರ್ಮಗುರುಗಳು ಉಪಸ್ಥಿತರಿದ್ದರು. ಈದ್ಗಾ ಸಮಿತಿ ಅಧ್ಯಕ್ಷ ಜೆ. ಜಾಫರ್, ಪ್ರಮುಖರಾದ ಜೆ. ಸಬ್ಜಲಿದಾದಾಸಾಬ್, ಎಂ. ಅಹ್ಮದ್, ಎಸ್. ರಿಯಾಜ್, ಎಂ. ಉಸ್ಮಾನ್, ಟಿ. ಜಾಫರ್, ವಾಹೀದ್, ಗನಿಸಾಬ್, ಅಕ್ಕಿಖಾಜಾ, ಅಕ್ಕಿ ಜಿಲಾನ್, ಶಫಿ ಶೇಖ್, ಸುಕೂರ್, ಮಹ್ಮದ್, ಎಸ್.ಆರ್. ಬಾಷಾ ಸೇರಿದಂತೆ ಹಲವರು ಭಾಗವಹಿಸಿದರು.