ಹಬ್ಬದ ಸಮಯದಲ್ಲಿ ತಿಂಗಳ ಕಾಲ ಉಪವಾಸದ ಮೂಲಕ ಕಠಿಣ ವ್ರತ ಆಚರಿಸಿ ದೇಹ ದಂಡಿಸಿ ಭಗವಂತನನ್ನು ಪ್ರಾರ್ಥಿಸುವ ನಿಮ್ಮ ಭಕ್ತಿಯ ಪರಾಕಾಷ್ಠೆ ಇತರರಿಗೆ ಮಾದರಿ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿರುವ ರಂಜಾನ್ ಸರ್ವರಿಗೂ ಒಳಿತನ್ನು ಉಂಟು ಮಾಡಲಿ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಮುಳ್ಳೂರು ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಇಲ್ಲಿನ ಮುಸ್ಲಿಂ ಬಡಾವಣೆಯ ಜಾಮೀಯಾ ಮಸೀದಿ ವತಿಯಿಂದ ರಂಜಾನ್ ಅಂಗವಾಗಿ ಆಯೋಜಿಸಿದ್ದ ಈದ್ ಉಲ್ ಪಿತರ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಬ್ಬದ ಸಮಯದಲ್ಲಿ ತಿಂಗಳ ಕಾಲ ಉಪವಾಸದ ಮೂಲಕ ಕಠಿಣ ವ್ರತ ಆಚರಿಸಿ ದೇಹ ದಂಡಿಸಿ ಭಗವಂತನನ್ನು ಪ್ರಾರ್ಥಿಸುವ ನಿಮ್ಮ ಭಕ್ತಿಯ ಪರಾಕಾಷ್ಠೆ ಇತರರಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಧರ್ಮ ಗುರುಗಳಾದ ಝನ್, ಮೂಳೆ ತಜ್ಞ ಡಾ. ಮೆಹಬೂಬ್ ಖಾನ್ ಮಾತನಾಡಿದರು.ಇದಕ್ಕೂ ಮೊದಲು ಮುಸ್ಲಿಂ ಬಡಾವಣೆಯ ಜಾಮೀಯಾ ಮಸೀದಿ ಬಳಿಯಿಂದ ಶಾದಿ ಮಹಲ್ ಬಳಿ ಇರುವ ಈದ್ಗಾ ಮೈದಾನದವರೆಗೆ ಮೆರವಣಿಗೆಯಲ್ಲಿ ತೆರಳಿದ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಮುಸ್ಲಿಂ ಮುಖಂಡರಾದ ಸೈಯದ್ ಜಾಬೀರ್, ಸಿದ್ದಿಕ್, ಜಾವೀದ್ ಪಾಷಾ, ನವೀದ್, ನವಾಜ್, ಸಾಕೀರ್, ಅಪ್ಸರ್ ಬಾಬು, ತಸಾವರ್ ಪಾಷಾ, ಇಕ್ಬಾಲ್, ಸೆರಾವತ್, ಸಮೀರ್, ಮೊಹಮದ್ ಆಲಿ, ಹುಸೇನ್, ಝನ್ ಇದ್ದರು.ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ರಂಜಾನ್ ಹಬ್ಬವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ಮಸೀದಿಯ ಧರ್ಮ ಗುರುಗಳಾದ ಆಸೀಫ್, ಮುಸ್ಲಿಂ ಮುಖಂಡರಾದ ಇಬ್ರಾಹಿಂ ಷರೀಫ್, ಇಸ್ಮಾಯಿಲ್ ,ಅಯ್ಯುಬ್, ಅನ್ವರ್, ಅಸ್ಲಾಂ ಇದ್ದರು.