ಸಾರಾಂಶ
ಗಾಯಗೊಂಡವರ ಆರೋಗ್ಯ ವಿಚಾರಿಸಿದ ಶಾಸಕ ಸಿಮೆಂಟ್ ಮಂಜು
ಸಕಲೇಶಪುರ: ಪಟ್ಟಣದಲ್ಲಿ ಒಂದೇ ದಿನ ಎಂಟು ಜನರನ್ನು ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಮಂಗಳವಾರ ಪಟ್ಟಣದ ಅರೇಹಳ್ಳಿ ಬೀದಿಯ ಕುಡಗರವಳ್ಳಿ ವೃತ್ತದಿಂದ ಹೊಸಬಸ್ ನಿಲ್ದಾಣದವರೆಗೆ ದಾಳಿ ನಡೆಸಿದ ಬೀದಿನಾಯಿ ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸಿದೆ.ಮೊದಲಿಗೆ ಕುಡಗರಹಳ್ಳಿ ವೃತ್ತದಲ್ಲಿ ಬಡಾವಣೆಯ ಶಾಲೆಯ ಶಿಕ್ಷಕಿ ಸಾಜೀಯ ಹಾಗೂ ಇದೆ ಶಾಲೆಯ ಅಡುಗೆ ಸಹಾಯಕಿ ಅಲಿಶಾ ಹಾಗೂ ಬಡಾವಣೆಯ ನಿವಾಸಿ ಈಶ್ವರ ಎಂಬುವವರನ್ನು ಕಚ್ಚಿಗಾಯಗೊಳಿಸಿದರೆ ನಂತರ ಅರೇಹಳ್ಳಿ ಬೀದಿಯ ತೇಜಸ್ವಿ ವೃತ್ತದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಅಕ್ಷತ ಹಾಗೂ ಪಾಲಕ್ಷ ಎಂಬುವವರನ್ನು ಗಾಯಗೊಳಿಸಿದೆ. ನಂತರ ಹಳೇಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಸಮೀಪ ಕಾರಿನಿಂದ ಇಳಿಯುತಿದ್ದ ಸುಳ್ಳಕ್ಕಿ ಗ್ರಾಮದ ದಮಯಂತಿ ಎಂಬುವವರನ್ನು ಕಚ್ಚಿಗಾಯಗೊಳಿಸಿದೆ. ಈ ವೇಳೆ ಸ್ಥಳದಲ್ಲಿದ್ದವರು ಅಲ್ಲಿಂದ ಓಡಿಸಿದ ಪರಿಣಾಮ ಕಾಣೆಯಾಗಿದ್ದ ನಾಯಿ ಪಟ್ಟಣದ ಗಂದರ್ವ ಬಾರ್ ಸಮೀಪ ಸ್ನೇಹಿತರ ಬಳಿ ಮಾತನಾಡುತ್ತಿದ್ದ ಜಯಂತ್ ಅವರನ್ನು ಕಚ್ಚಿ ಗಾಯಗೊಳಿಸಿದೆ. ಇದಾದ ಬಳಿಕ ಹೊಸಬಸ್ ನಿಲ್ದಾಣ ಸಮೀಪ ಆಟೋ ಚಾಲಕರೊಬ್ಬರನ್ನು ಕಚ್ಚಿದ್ದು ಬಿಳಿಬಣ್ಣದ ನಾಯಿ ಯಾರು ಕೈಗೂ ಸಿಗದೆ ಪರಾರಿಯಾಗಿದೆ. ಬಿಳಿ ಬಣ್ಣದ ನಾಯಿ ಕಂಡರೆ ಜನರು ಹೌಹಾರುತ್ತಿದ್ದಾರೆ. ನಿರಂತರವಾಗಿ ಜನರನ್ನು ಕಚ್ಚಿ ಗಾಯಗೊಳಿಸಿರುವ ನಾಯಿಗೆ ಹಚ್ಚು ಹಿಡಿದಿರಬಹುದು ಎಂದು ಜನರು ಆರೋಪಿಸಿದ್ದಾರೆ.
ಆಸ್ಪತ್ರೆಗೆ ಭೇಟಿ:ನಾಯಿ ಕಡಿತಕ್ಕೆ ಒಳಗಾದ ಜನರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ದಾಖಲಾಗಿದ್ದರು. ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ನಾಯಿ ಕಡಿತಕ್ಕೆ ಒಳಗಾದ ಜನರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ನಂತರ ಪುರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಶೀಘ್ರ ಈ ಸಮಸ್ಯೆ ಪೀಡಿತ ನಾಯಿಯನ್ನು ಸೆರೆಹಿಡಿಯಬೇಕು ಅಲ್ಲದೆ ಇನ್ನೊಂದು ವಾರದಲ್ಲಿ ಎಲ್ಲ ಬೀದಿ ನಾಯಿಗಳಿಗೂ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ತಾಕೀತು ಮಾಡಿದರು.ಬೀದಿನಾಯಿ ಕಡಿತಕ್ಕೆ ಒಳಗಾದ ಜನರ ಆರೋಗ್ಯವನ್ನು ಶಾಸಕ ಸೀಮೆಂಟ್ ಮಂಜು ವಿಚಾರಿಸಿದರು.