ಉಪ್ಪಾರಗಟ್ಟಿಯಲ್ಲಿ ಸಿಡಿಲಿಗೆ ಎಂಟು ಕುರಿ ಸಾವು

| Published : Apr 23 2024, 12:45 AM IST

ಸಾರಾಂಶ

ಕುರಿಗಾಯಿಯ ಕೈಗೆ ಸಿಡಿಲು ಬಡಿದಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ಉಪ್ಪಾರಗಟ್ಟಿ ಗ್ರಾಮದ ಕುರುಬರ ರೇವಣಸಿದ್ದಪ್ಪ ಎಂಬುವರ ಎಂಟು ಕುರಿಗಳು ಸಿಡಿಲಿಗೆ ಸೋಮವಾರ ಸಂಜೆ ಬಲಿಯಾಗಿವೆ.

ಕುರಿಗಾಯಿಯ ಕೈಗೆ ಸಿಡಿಲು ಬಡಿದಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಬಿರುಗಾಳಿ ಸಹಿತ ತುಂತುರು ಮಳೆ ಸುರಿಯಿತು.

ಹನಸಿ, ಹೊಸಕೇರಿ, ಉಪ್ಪಾರಗಟ್ಟಿ, ಆನೇಕಲ್ಲು, ಹಂಪಾಪಟ್ಟಣ ಗ್ರಾಮಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿರುವ ವರದಿಯಾಗಿದೆ. ಇನ್ನುಳಿದೆಡೆ ತುಂತುರು ಮಳೆ ಸುರಿದಿದೆ. ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರ ಶಾಲೆಯ ಬಳಿ ಬಾರಿ ಗಾಳಿಗೆ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು ಕೂಡ ಅಲ್ಲಲ್ಲಿ ಬಾಗಿವೆ.

ಕಾಳಜಿ ಮೆರೆದ ತುಕಾರಾಂ:

ಸೋಮವಾರ ಸಂಜೆ ಹಂಪಾಪಟ್ಟಣ ಗ್ರಾಮಕ್ಕೆ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ವೇಳೆ ಮಾರ್ಗಮಧ್ಯೆ ಭಾರಿ ಗಾಳಿಗೆ ಆನಂದೇವನಹಳ್ಳಿ ಬಳಿ ಮರವೊಂದು ರಸ್ತೆಗೆ ಬಿದ್ದಿರುವುದನ್ನು ಕಂಡು ತಮ್ಮ ಕಾರು ನಿಲ್ಲಿಸಿ ಬೈಕ್ ಸವಾರರಿಗೆ, ವಾಹನ ಚಾಲಕರಿಗೆ ತಿಳಿಸಿ ರಸ್ತೆಯ ಪಕ್ಕದಲ್ಲಿ ಹೋಗುವಂತೆ ಸೂಚಿಸಿದರು.

ಭಾರಿ ಗಾಳಿ ಇದ್ದರೂ ತುಕಾರಾಂ ರಸ್ತೆಯಲ್ಲಿ ಸಂಚರಿಸುವವರಿಗೆ ಸೂಚನೆ ನೀಡುತ್ತಾ ನಿಂತಿದ್ದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಯಿತು. ಅವರ ಜತೆಗೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಇದ್ದರು.