ಉಡುಪಿ: ವಯೋವೃದ್ಧರೊಬ್ಬರು ಮೂರು ದಿನಗಳ ಹಿಂದೆ ಬಾವಿಯಲ್ಲಿ ಬಿದ್ದು ಬದುಕಿ ಬಂದ ಪವಾಡ ಸದೃಶ್ಯ ಘಟನೆ ನಡೆದಿದೆ. ಉಡುಪಿ ನಗರದ ಕೊಡವೂರು ವಾರ್ಡಿನ ಕಂಬ್ಳಕಟ್ಟ ಎಂಬಲ್ಲಿ ಈ ಘಟನೆ ನಡದಿದೆ. ಇಲ್ಲಿನ ಶ್ರೀನಿವಾಸ ಆಚಾರ್ಯ (63) ಸಾವನ್ನು ಗೆದ್ದು ಬಂದವರು.

ನಿರ್ಜನ ಪ್ರದೇಶದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಆಚಾರ್ಯ, ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದರು. ಇತ್ತೀಚೆಗೆ ಮನೆಯ ತೋಟಕ್ಕೆ ನೀರುಣಿಸಲು ಹೋದಾಗ ಬಾವಿಯಲ್ಲಿ ಕಸ ಇರುವುದನ್ನು ಕಂಡು, ಬಾವಿಯಲ್ಲಿದ್ದ ಪಂಪಿನ ಪೈಪನ್ನು ಮೇಲೆಕ್ಕೆ ಎಳೆಯುವಾದ ಆಯ ತಪ್ಪಿ ಬಾವಿಗೆ ಬಿದ್ದುಬಿಟ್ಟರು.

ಸುಮಾರು 30 ಅಡಿ ಆಳದ ಬಾವಿಯಲ್ಲಿ ಸಾಕಷ್ಟು ನೀರಿದ್ದು, ಅವರು ಬಾವಿಯಲ್ಲಿದ್ದ ಸಬ್‌ ಮರ್ಸಿಬಲ್ ಪಂಪಿನ ಮೇಲೆ ಅದಕ್ಕೆ ಕಟ್ಟಿದ್ದ ಹಗ್ಗವನ್ನು ಹಿಡಿದು ಕುಳಿತುಕೊಂಡು, ಯಾರಾದರೂ ತನ್ನನ್ನು ಮೇಲೆತ್ತುವಂತೆ ಕೂಗಿಕೊಂಡರು. ಆದರೆ ನಿರ್ಜನ ಪ್ರದೇಶವಾದುದರಿಂದ ಅವರ ಕೂಗು ಯಾರಿಗೂ ಕೇಳಲಿಲ್ಲ.

ಅವರು ಮನೆಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದು, ಗ್ಯಾಸ್ ಏಜೆನ್ಸಿಯವರು ಸಿಲಿಂಡರ್ ನೀಡಲು ಬಂದಾಗ ತೆರೆದಿದ್ದ ಮನೆಯಲ್ಲಿ ಯಾರೂ ಇರಲಿಲ್ಲ, ಅವರಿಗೆ ಆಚಾರ್ಯರ ಮೊಬೈಲಿಗೆ ಬಂದ ಓಟಿಪಿ ಬೇಕಿತ್ತು, ಕೊನೆಗೆ ಅವರು ಪರಿಚಯದ ಶ್ರೀನಿವಾಸ್ ಎಂಬವರಿಗೆ ಮಾಹಿತಿ ನೀಡಿದರು, ಅವರು ಸಂಶಯಗೊಂಡು ತೋಟದಲ್ಲಿ, ಬಾವಿಯಲ್ಲಿ ಹುಡುಕಾಡಿದಾಗ ಆಚಾರ್ಯರು ತೀರಾ ಅಸ್ವಸ್ಥರಾಗಿ ಬಾವಿಯಲ್ಲಿ ಪಂಪಿನ ಮೇಲೆ ಕುಳಿತಿರುವುದು ಕಂಡುಬಂತು.

ತಕ್ಷಣ ಅಗ್ನಿಶಾಮಕ ದಳದವರನ್ನು ಕರೆಸಿ ಆಚಾರ್ಯರನ್ನು ಮೇಲೆಕ್ಕೆತ್ತಲಾಯಿತು. ಮಾತನಾಡುವ ಸ್ಥಿತಿಯಲ್ಲಿರದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚೇತರಿಸಿಕೊಂಡಿದ್ದಾರೆ. ತಾನು 3 ದಿನಗಳಿಂದ ಬಾವಿಯಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ.