ಸಾರಾಂಶ
ಸಿದ್ದಾಪುರ : ಇಲ್ಲಿಗೆ ಸಮೀಪದ ಮಾಲ್ದಾರೆ ಗ್ರಾಮ ಪಂ. ವ್ಯಾಪ್ತಿಯ ಮಾಲ್ದಾರೆ, ಹಾಗೂ ಮಠ ಗ್ರಾಮದಲ್ಲಿ ಕಾರು ಹಾಗೂ ಬೈಕ್ ಮೇಲೆ ಶುಕ್ರವಾರ ಕಾಡಾನೆ ದಾಳಿ ಮಾಡಿ ವಾಹನ ಸಂಪೂರ್ಣ ಜಖಂಗೊಳಿಸಿದ ಪ್ರತ್ಯೇಕ ಘಟನೆಗಳು ನಡೆದಿವೆ.
ಮಠ ಗ್ರಾಮದ ಹೇಮಂತ್ ಮನೆಯ ಸಮೀಪ ನಿಲ್ಲಿಸಿದ ಕಾರಿನ ಮೇಲೆ ಸಮೀಪದಲ್ಲಿದ ತೆಂಗಿನ ಮರ ತಳ್ಳಿ ಹಾಕಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಳಿಸಿದೆ.
ಮಾಲ್ದಾರೆ ಗ್ರಾಮದ ಆಸ್ತಾನ ಹಾಡಿಯ ರಮೇಶ್ ಎಂಬವರ ಬೈಕ್ ಮಾಲ್ದಾರೆಯ ಮುತ್ತಪ್ಪ ಗಣಪತಿ ದೇವಸ್ಥಾನದ ಸಮೀಪವಿರುವ ನಾಯಡ ವಿಜು ಎಂಬುವರ ತೋಟದ ಪಕ್ಕ ನಿಲ್ಲಿಸಲಾಗಿತ್ತು. ಬೆಳಗ್ಗೆ ಕಾಡಾನೆ ಬೈಕ್ ನ ಮೇಲೆ ದಾಳಿ ನಡೆಸಿ ಬೈಕ್ ನ್ನು ಸಂಪೂರ್ಣ ಜಖಂಗೊಳಿಸಿದೆ ಹಾಗೂ ತೋಟ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲು ಕಾಡಾನೆ ದಾಳಿಗೆ ಯತ್ನಿಸಿದೆ ಕಾಡಾನೆದಾಳಿಯಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾಡಾನೆ ತೋಟದಲ್ಲಿ ಬೀಡು ಬಿಟ್ಟಿದ್ದು ಕಾಡಾನೆಯನ್ನು ಕಾಡಿಗೆ ಗಟ್ಟುವ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಸ್ಥಳಕ್ಕೆ ತಿತಿಮತಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಆರ್. ಆರ್. ಟಿ. ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.