ಸಾರಾಂಶ
ಯಲ್ಲಾಪುರ: ಅಕ್ರಮವಾಗಿ ವಿದ್ಯುತ್ ಮಾರ್ಗದಿಂದ ತಂತಿ ಹಾಕಿ ತೋಟದ ಬೇಲಿಗೆ ವಿದ್ಯುತ್ ಸಂಪರ್ಕಿಸಿ ಆನೆ ಸಾವಿಗೆ ಕಾರಣನಾದ ಆರೋಪಿಯನ್ನು ಆರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.ಶುಕ್ರವಾರ ಬೆಳಗಿನ ಜಾವದಲ್ಲಿ ದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಗೆ ಬಳಿಯ ಇಟ್ಕೆಮನೆಯ ತೋಟವೊಂದರಲ್ಲಿ ವಿದ್ಯುತ್ ಸಂಪರ್ಕದಿಂದ ಆನೆಯೊಂದು ಮೃತಪಟ್ಟಿತ್ತು. ಇದರಿಂದ ಅನುಮಾನಗೊಂಡ ಅರಣ್ಯ ಇಲಾಖೆ ಎರಡು ತಂಡ ರಚಿಸಿ ತನಿಖೆ ನಡೆಸಿತ್ತು. ತನಿಖೆಯ ಪರಿಣಾಮ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಬೇಲಿಗೆ ಹಾಕಿದ್ದರಿಂದ ಆನೆ ಮೃತಪಟ್ಟಿರುವುದು ತಿಳಿದುಬಂತು.ಆನೆ ಸಾವಿಗೆ ಕಾರಣನಾದ ಆರೋಪಿ, ತೋಟದ ಮಾಲೀಕ ಪರಮೇಶ್ವರ ರಾಮಾ ಕುಣಬಿ ಈತನನ್ನು ಬಂಧಿಸಲಾಗಿದೆ. ಆನೆ ಸಾವಿಗೆ ಕಾರಣವಾಗಿ ವಿದ್ಯುತ್ ಸಂಪರ್ಕ ಪಡೆದ ರಕ್ತಸಿಕ್ತವಾದ ತಂತಿ, ಪಕ್ಕಡ, ಮುಂತಾದ ಸಾಮಗ್ರಿಗಳನ್ನು ಆರೋಪಿಯಿಂದ ವಶಪಡಿಸಿಕೊಂಡಿದ್ದು, ಕಾಡು ಹಂದಿಯಿಂದ ರಕ್ಷಣೆ ಪಡೆಯಲು ವಿದ್ಯುತ್ ಬೇಲಿಗೆ ಹಾಕಿದ್ದೆ ಆನೆ ಸಾವಿಗೀಡಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ತಿಳಿದುಬಂದಿದೆ.ಡಿಸಿಎಫ್ ಹರ್ಷಬಾನು, ಎಸಿಎಫ್ ಆನಂದ ಮಾರ್ಗದರ್ಶನದಲ್ಲಿ, ಆರ್ಎಫ್ಒ ಎಲ್.ಎ ಮಠ, ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಶಿವಾನಂದ ಕಡಹಟ್ಟಿ, ಶ್ರೀನಿವಾಸ ನಾಯ್ಕ, ಅಲ್ತಾಫ ಚೌಕಡಾಕ, ಜಿ. ಸಂತೋಷ, ಬಸವಲಿಂಗಪ್ಪ ಲಿಂಗಪ್ಪ, ಆಶೋಕ ಶಿರಗಾಂವಿ, ಅಶೋಕ ಹಳ್ಳಿ, ಸಂಜಯಕುಮರ ಬೋರಗಲ್ಲಿ, ಶರಣಬಸು ದೇವರ, ಉಮೇಶ ಹೊಸಮನಿ, ಗಸ್ತು ಅರಣ್ಯ ಪಾಲಕರಾದ ಸಂಗನೇಶ ಸುಂಕದ, ಗೌರೀಶ ನಾಯ್ಕ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.