ಗಾಂಧೀಜಿಯ ಆದರ್ಶ ಗುಣ ಮೈಗೂಡಿಸಿಕೊಳ್ಳಿ: ನ್ಯಾ.ಎಂ.ಮಹೇಂದ್ರ

| Published : Feb 01 2025, 12:02 AM IST

ಗಾಂಧೀಜಿಯ ಆದರ್ಶ ಗುಣ ಮೈಗೂಡಿಸಿಕೊಳ್ಳಿ: ನ್ಯಾ.ಎಂ.ಮಹೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸೈನಿಕರು ದೇಶ ಕಾಯುತ್ತಿರುವ ಪ್ರತಿಫಲದಿಂದ ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸುವಂತಾಗಿದೆ. ದೇಶಕ್ಕಾಗಿ ಪ್ರಾಣ ನೀಡುವ ಸೈನಿಕರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕೆಂದು ಕರೆ ನೀಡಿದರು.

ಗಾಂಧಿ ಪುಣ್ಯಸ್ಮರಣೆ, ಯೋಧರ ಹುತಾತ್ಮ ದಿನಾಚರಣೆ । ಶ್ರಮದಾನ

ಮಳವಳ್ಳಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಮಹಾತ್ಮರ ಆಶಯದಂತೆ ಶ್ರಮದಾನದ ಮೂಲಕ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ತಿಳಿಸಿದರು.

ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನ ಹಾಗೂ ನ್ಯಾಯಾಲಯದ ಆವರಣದಲ್ಲಿ ಮಹಾತ್ಮಗಾಂಧಿ ಪುಣ್ಯಸ್ಮರಣೆ ಹಾಗೂ ಯೋಧರ ಹುತಾತ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರು ಅಹಿಂಸಾ ಮಾರ್ಗದ ಮೂಲಕ ಸ್ವತಂತ್ರವನ್ನು ತಂದುಕೊಟ್ಟರು. ಅವರು ಅನುಸರಿಸಿದ ಹಾದಿಯಲ್ಲಿ ಪ್ರತಿಯೊಬ್ಬರೂ ಮುಂದುವರಿಯಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರನ್ನು ಸ್ಮರಿಸಿಕೊಳ್ಳಬೇಕಿದೆ ಎಂದರು.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನ್ಯಾಯಾಧೀಶರು, ವಕೀಲರ ಸಂಘ ಹಾಗೂ ಪುರಸಭೆಯಿಂದ ದಂಡಿನ ಮಾರಮ್ಮ ಹಾಗೂ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಪರಿಶ್ರಮದಿಂದಾಗಿ ದೇಶಕ್ಕೆ ಸ್ವತಂತ್ರ ಬಂದು ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸುವಂತಾಗಿದೆ. ಗಾಂಧೀಜಿ ಅವರ ತತ್ವ, ಆದರ್ಶಗಳು ಇಂದಿನ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದರು.

ಸೈನಿಕರು ದೇಶ ಕಾಯುತ್ತಿರುವ ಪ್ರತಿಫಲದಿಂದ ಪ್ರತಿಯೊಬ್ಬರೂ ನೆಮ್ಮದಿ ಜೀವನ ಸಾಗಿಸುವಂತಾಗಿದೆ. ದೇಶಕ್ಕಾಗಿ ಪ್ರಾಣ ನೀಡುವ ಸೈನಿಕರಿಗೆ ಪ್ರತಿಯೊಬ್ಬರು ಗೌರವ ಸಲ್ಲಿಸಬೇಕೆಂದು ಕರೆ ನೀಡಿದರು.

ದಂಡಿನಮಾರಮ್ಮ ಹಾಗೂ ನ್ಯಾಯಾಲಯದ ಆವರಣವನ್ನು ನ್ಯಾಯಾಧೀಶರು, ವಕೀಲರು, ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು. ಮಹಾತ್ಮ ಗಾಂಧೀಜಿ ಸ್ಮರಣಾರ್ಥ ಭಜನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಚಿನ್‌ಕುಮಾರ್ ಶಿವಪೂಜಿ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.