ಜನಮುಖಿ ಚಿಂತನೆಯಿಂದ ಸೇವೆಯ ಸದಾಶಯ ಸಾಕಾರ; ಬಿ.ಎಸ್.ನಾಗರಾಜ್‌

| Published : Jan 27 2024, 01:21 AM IST

ಸಾರಾಂಶ

ಅಪೌಷ್ಟಿಕತೆ ನಿವಾರಣೆ ಉದ್ದೇಶದಿಂದ ಜಾರಿಗೊಳಿಸಲಾಗಿರುವ ನ್ಯೂಟ್ರಿಷನ್ ಸಪ್ಲಿಮೆಂಟ್‌ ವಿತರಣೆ ಕಾರ್ಯವನ್ನು ತಾಲೂಕಿನ 48 ಸರ್ಕಾರಿ ಶಾಲೆಗಳಲ್ಲಿ ದಿನನಿತ್ಯ ಜಾರಿಗೊಳಿಸಿರುವುದು ಮತ್ತು ಕ್ವೆಸ್ಟ್‌ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಆರ್.ಎಲ್.ಜಾಲಪ್ಪ ಲಯನ್ಸ್‌ ಕ್ಲಬ್‌ನ ಹೆಗ್ಗಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸಾಮಾಜಿಕ ಸೇವಾ ಕಾರ್‍ಯಗಳು ಸಂಘಟನೆಗಳ ಅವಿಭಾಜ್ಯ ಅಂಗವಾಗಬೇಕು. ಅಶಕ್ತ ಹಾಗೂ ಅವಶ್ಯಕತೆಯುಳ್ಳ ವಲಯಕ್ಕೆ ಸೇವೆಯ ಮೂಲಕ ನೆರವು ಒದಗಿಸುವುದು ಲಯನ್ಸ್ ಕ್ಲಬ್‌ನ ಧ್ಯೇಯವಾಗಿದೆ ಎಂದು ಲಯನ್ಸ್ ಜಿಲ್ಲೆ 317ಎಫ್‌ನ ರಾಜ್ಯಪಾಲ ಬಿ.ಎಸ್.ನಾಗರಾಜ್‌ ಹೇಳಿದರು.

ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಅಕ್ಷಯ ಲಿಯೋ ಕ್ಲಬ್‌ಗಳಿಗೆ ಜಿಲ್ಲಾ ರಾಜ್ಯಪಾಲರ ವಾರ್ಷಿಕ ಅಧಿಕೃತ ಭೇಟಿಯ ವೇಳೆ ಎಸ್‌ಡಿಯುಐಆರ್‌ಎಸ್ ಸಭಾಂಗಣದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಅಪೌಷ್ಟಿಕತೆ ನಿವಾರಣೆ ಉದ್ದೇಶದಿಂದ ಜಾರಿಗೊಳಿಸಲಾಗಿರುವ ನ್ಯೂಟ್ರಿಷನ್ ಸಪ್ಲಿಮೆಂಟ್‌ ವಿತರಣೆ ಕಾರ್ಯವನ್ನು ತಾಲೂಕಿನ 48 ಸರ್ಕಾರಿ ಶಾಲೆಗಳಲ್ಲಿ ದಿನನಿತ್ಯ ಜಾರಿಗೊಳಿಸಿರುವುದು ಮತ್ತು ಕ್ವೆಸ್ಟ್‌ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಆರ್.ಎಲ್.ಜಾಲಪ್ಪ ಲಯನ್ಸ್‌ ಕ್ಲಬ್‌ನ ಹೆಗ್ಗಳಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜನ ಸೇವೆಯನ್ನೇ ಮೂಲ ಆಶಯವಾಗಿ ಹೊಂದಿರುವ ಲಯನ್ಸ್ ಸಂಸ್ಥೆ ಜಾಗತಿಕವಾಗಿ ಮಹತ್ವದ ಸ್ಥಾನವನ್ನು ಹೊಂದಿದೆ. ಹಸಿವು ನಿವಾರಣೆ, ಸಾಮಾಜಿಕ ಸಂಕಷ್ಟಗಳ ವಿರುದ್ದ ಸೇವಾ ಸಂಕಲ್ಪದ ಹೋರಾಟ ನಿರಂತವಾಗಿದೆ. ಮಧುಮೇಹ ಜಾಗೃತಿ ಮತ್ತು ಚಿಕಿತ್ಸೆ ವಿಶೇಷ ಕ್ಲಬ್ ಆಗಿ ನೊಂದಣಿಯಾಗಿ ದಾಖಲೆಯ ಕಾರ್‍ಯಕ್ರಮಗಳನ್ನು ಆಯೋಜಿಸುವ ಮೂಲಕ ಫಲಾನುಭವಿಗಳಿಗೆ ಹಲವು ಸೌಲಭ್ಯಗಳನ್ನು ತಲುಪಿಸಿದೆ. ಮಧುಮೇಹ ತಪಾಸಣೆ, ಕಣ್ಣಿನ ಆರೋಗ್ಯ ತಪಾಸಣೆ, ಸಾಮಾಜಿಕ ಸೇವಾ ಕಾರ್‍ಯಗಳು, ಪಶು ಆರೋಗ್ಯ ರಕ್ಷಣೆ ಜಾಗೃತಿಯಲ್ಲೂ ವಿಶೇಷ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

ಜಾಲಪ್ಪ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ ಮಾತನಾಡಿ, ಸೇವಾ ಹಾಗೂ ಆಡಳಿತಾತ್ಮಕ ಕಾರ್‍ಯಗಳ ಮೂಲಕ ಲಯನ್ಸ್ ಜಿಲ್ಲೆ 317ಎಫ್‌ನಲ್ಲಿ ಛಾಪನ್ನು ಮೂಡಿಸಲು ಯಶಸ್ವಿಯಾಗಿದೆ ಎಂದರು.

ಹಲವರಿಗೆ ಸವಲತ್ತು ವಿತರಣೆ:

ಇದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ದಿವ್ಯಾಂಗ ಫಲಾನುಭವಿಗೆ ಆರ್ಥಿಕ ನೆರವು, ಆಶಾ ಕಾರ್ಯಕರ್ತೆಯರು, ಮಹಿಳಾ ಅಂಚೆ ಸಿಬ್ಬಂದಿ, ಪೌರಕಾರ್ಮಿಕರು, ಬಡಗಿ, ವಾಹನ ಚಾಲಕರು, ಕ್ಲೀನರ್‌ಗಳಿಗೆ ವಿವಿಧ ಸವಲತ್ತು ವಿತರಣೆ, ಅಭಿನಂದನೆ ನಡೆಯಿತು. ಇದೇ ವೇಳೆ ಸಂಸ್ಥೆಯ "ಅನಾವರಣ " ತ್ರೈಮಾಸಿಕ ಸುದ್ದಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ಸೇವಾ ಚಟುವಟಿಕೆ:

ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಸಂಸ್ಥೆಯ ವತಿಯಿಂದ ಬಸ್‌ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಧುಮೇಹ ತಪಾಸಣೆ, ಹಸನಘಟ್ಟ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ವಾಹನಗಳ ವಾಯುಮಾಲಿನ್ಯ ತಪಾಸಣೆ, ಸಾಕುನಾಯಿಗಳಿಗೆ ಲಸಿಕೆ, ಗಿಡ ನೆಡುವ ಕಾರ್ಯಕ್ರಮ, ಚೇತನ ಶಾಲೆಯಲ್ಲಿ ದಂತ ತಪಾಸಣೆ ಶಿಬಿರ, ಘಾಟಿ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಗೋಪೂಜೆ, ಮೇವು ಸಹಾಯಧನ ವಿತರಣೆ, ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಪೂಜೆ, ಜಾಲಪ್ಪ ಆಟೋ ನಿಲ್ದಾಣದಲ್ಲಿ ಲಯನ್ಸ್ ಸ್ವಾಗತ ಫಲಕ ಅನಾವರಣ, ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ, ದೇವರಾಜ ಅರಸು ಪದವಿ ಕಾಲೇಜಿನಲ್ಲಿ ಸೈಬರ್‌ ಜಾಗೃತಿ, ವಸತಿ ಶಾಲೆ ಆವರಣದಲ್ಲಿ ಹಕ್ಕಿಗೂಡುಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಸಂಪುಟ ಕಾರ್‍ಯದರ್ಶಿ ವಿ.ಕೆ.ರಾಜೇಶ್, ಖಜಾಂಚಿ ಆರ್.ಕೆ.ಹೆಗಡೆ, ಪ್ರಾಂತಿಯ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ವಲಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಕ್ಲಬ್‌ನ ಕಾರ್ಯದರ್ಶಿ ಮುಕೇಶ್, ಖಜಾಂಚಿ ಎ.ರವಿಕುಮಾರ್, ಜಂಟಿ ಕಾರ್ಯದರ್ಶಿ ಅರುಂಧತಿ, ಉಪಾಧ್ಯಕ್ಷರಾದ ಜೆ.ಆರ್.ರಾಕೇಶ್, ಮುನಿರಾಮೇಗೌಡ, ಕೆ.ಆರ್.ರವಿಕಿರಣ್‌ , ಅಕ್ಷಯ ಲಿಯೋ ಕ್ಲಬ್ ಕಾರ್ಯದರ್ಶಿ ಆರ್.ಸಂಧ್ಯಾ ಮತ್ತಿತರರು ಪಾಲ್ಗೊಂಡಿದ್ದರು.