ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಸಮಾಜದಲ್ಲಿನ ಕಲುಷಿತ ಮನೋಭಾವ ಹಾಗೂ ದುಷ್ಪರಿಣಾಮಗಳನ್ನು ಶುದ್ಧೀಕರಿಸಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬದುಕಿಗೆ ಮಾರ್ಗದರ್ಶನ ನೀಡುವವರೇ ಮುನಿಗಳು. ಅವರ ತ್ಯಾಗ, ಸಂಯಮ ಮತ್ತು ಅಹಿಂಸೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಮಾಜದಲ್ಲಿನ ಕಲುಷಿತ ಮನೋಭಾವ ಹಾಗೂ ದುಷ್ಪರಿಣಾಮಗಳನ್ನು ಶುದ್ಧೀಕರಿಸಿ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಬದುಕಿಗೆ ಮಾರ್ಗದರ್ಶನ ನೀಡುವವರೇ ಮುನಿಗಳು. ಅವರ ತ್ಯಾಗ, ಸಂಯಮ ಮತ್ತು ಅಹಿಂಸೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನ ಮುನಿ ಆಚಾರ್ಯ ಶ್ರೀ 108 ಕುಲರತ್ನಭೂಷಣ ಮಹಾರಾಜರು ಹೇಳಿದರು.

ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಚಾತುರ್ಮಾಸ ಅಂಗವಾಗಿ ಶುಕ್ರವಾರ ಬೆಳಗ್ಗೆ ನಡೆದ ಮಕ್ಕಳ ಸಂಸ್ಕಾರ ಶಿಬಿರದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಮುನಿಗಳ ಜೀವನವು ಸಂಪೂರ್ಣವಾಗಿ ಸಮಾಜದ ಉದ್ಧಾರಕ್ಕೆ ಸಮರ್ಪಿತವಾಗಿರುತ್ತದೆ. ಮುನಿಗಳಿಗೆ ಕಾಲಲ್ಲಿ ಪಾದುಕೆ, ತಲೆಯ ಮೇಲೆ ಕಿರೀಟ, ಬ್ಯಾಂಕಿನಲ್ಲಿ ಖಾತೆ, ಮೈಮೇಲೆ ಬಟ್ಟೆ ಅಥವಾ ಮನಸ್ಸಿನಲ್ಲಿ ಕಲುಷಿತ ಭಾವನೆ ಇರುವುದಿಲ್ಲ. ಯಾರೊಂದಿಗೂ ಜಗಳವಾಡದೆ, ತ್ಯಾಗ, ಸಂಯಮ ಹಾಗೂ ಪರಿಶುದ್ಧ ಮನಸ್ಸಿನಿಂದ ಜೀವನ ಸಾಗಿಸುವವರೇ ದಿಗಂಬರ ಮುನಿಗಳಾಗಿ ಸಮಾಜಕ್ಕೆ ಆದರ್ಶರಾಗಿರುತ್ತಾರೋ ಅವರೇ ಮುನಿಗಳು ಎಂದರು.

ಮಕ್ಕಳು ಮುನಿಗಳು ಬೋಧಿಸುವ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯರನ್ನು ಗೌರವಿಸುವುದು, ಸತ್ಯ, ಅಹಿಂಸೆ, ಶಿಸ್ತು, ಪರೋಪಕಾರ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳು ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಂಡರೆ ಮುಂದಿನ ಪೀಳಿಗೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಸಂಸ್ಕಾರ ಶಿಬಿರವು ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಧಾರ್ಮಿಕ ಭಾವನೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಶಿಬಿರಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಹಿರಿಯರು ಹಾಗೂ ಮುನಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನೇಕ ಬಾಲಕರು, ಶ್ರಾವಕರು ಹಾಗೂ ಶ್ರಾವಕಿಯರು ಭಾಗವಹಿಸಿದ್ದರು.