ಸಾರಾಂಶ
ಕನ್ನಡಪ್ರಭ ವಾರ್ತೆವಿಜಯಪುರ
ರೈತರ ಪರಿಸರಸ್ನೇಹಿ ಕೀಟನಾಶಕ ಬಳಕೆ ಕುರಿತು ಕೀಟಶಾಸ್ತ್ರಜ್ಞರು ಒತ್ತು ನೀಡಬೇಕಾಗಿದೆ ಎಂದು ಕೃಷಿ ಮಹಾವಿದ್ಯಾಲಯ ಡೀನ್ ಡಾ.ಅಶೋಕ ಸಜ್ಜನ ಹೇಳಿದರು.ನಗರದ ಹೊರವಲಯದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಕೀಟಶಾಸ್ತ್ರ ವಿಭಾಗದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕೃಷಿ ಕೀಟಶಾಸ್ತ್ರ ಕ್ಷೇತ್ರದಲ್ಲಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಗುಣಮಟ್ಟವನ್ನು ನೀಡುವುದು ಮತ್ತು ನಿರ್ವಹಿಸುವುದು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೃಷಿ ಕೀಟಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಕ್ರಮ ರೂಪಿಸಲು ಮತ್ತು ಸ್ವತಂತ್ರ ಸಂಶೋಧನೆ ನಡೆಸಲು ಸಜ್ಜುಗೊಳಿಸಬೇಕಾಗಿದೆ ಎಂದು ಹೇಳಿದರು.
ಇಂದು ಅನೇಕ ಕೀಟಗಳು ಬೆಳೆಗಳನ್ನು ಬಾಧಿಸುತ್ತವೆ. ಅವುಗಳ ಹತೋಟಿಗಾಗಿ ವಿವಿಧ ಕೀಟನಾಶಕ ಬಳಕೆ ಅನಿವಾರ್ಯವಾದರೂ, ಪರಿಸರ ಸ್ನೇಹಿ ಕೀಟನಾಶಕ ಬಳಕೆಯ ಕುರಿತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಕೃಷಿ ಸಮುದಾಯಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ ಕೃಷಿಯಲ್ಲಿ ಕೀಟ, ಕೀಟಗಳ ಸವಾಲುಗಳಿಗೆ ನವೀನ ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಒದಗಿಸಲು, ನವೀನ ಸಂಶೋಧನಾ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಸೃಜನಶೀಲ, ಹೆಚ್ಚು ಗೋಚರಿಸುವ, ಸಮಸ್ಯೆ-ಪರಿಹಾರ ವಿಸ್ತರಣಾ ಕಾರ್ಯಕ್ರಮಗಳನ್ನು ಒದಗಿಸಲು ವಿಭಾಗದ ಪ್ರಾಧ್ಯಾಪಕರು ಬದ್ಧರಾಗಿದ್ದಾರೆ ಎಂದು ತಿಳಿಸಿದರು.ಇಂದು ರೈತರು, ಬೆಳೆಗಳಲ್ಲಿನ ಕೀಟಗಳ ನಿಯಂತ್ರಣಕ್ಕೆ ಹಲವು ಬಗೆಯ ಕೀಟನಾಶಕಗಳ ಬಳಕೆ ಮಾಡುತ್ತಿದ್ದು, ಸಮಗ್ರ ಕೀಟನಾಶಕ ಬಳಕೆಯತ್ತ ತಮ್ಮ ಗಮನ ಹರಿಸಬೇಕು ಎಂದು ತಿಳಿಸಿದರು.
ಉಪಕೃಷಿ ನಿರ್ದೇಶಕ ಡಾ.ಬಾಲರಾಜ ಬಿರಾದಾರ ಮಾತನಾಡಿ, ರೈತರಿಗೆ ಅನುಕೂಲವಾಗುವ ಮತ್ತು ಅಳವಡಿಸಿಕೊಳ್ಳಬಹುದಾದಂತಹ ಸುಲಭ ಕೀಟನಿರ್ವಹಣೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು ಎಂದರು.ಕೀಟಶಾಸ್ತ್ರ ವಿಭಾಗದ ವಿವಿ ಮುಖ್ಯಸ್ಥ ಡಾ.ಎಸ್.ಬಿ.ಜಗ್ಗಿನವರ ಪ್ರಾಸ್ತಾವಿಕವಾಗಿ ಮಾತನಾಡಿ, ಒಟ್ಟು ೩೧ ಕೀಟ ವಿಜ್ಞಾನಿಗಳಿದ್ದು, ಅವರೆಲ್ಲರು ಕೃಷಿ ಕೀಟಶಾಸ್ತ್ರದಲ್ಲಿ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಹಣಕಾಸಿನ ಮಂಜೂರಾತಿಗಳೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ತಂತ್ರಜ್ಞಾನ ಅಭಿವೃದ್ಧಿಪಡಿಸುವದರ ಮೂಲಕ ಸುಸ್ಥಿರ ಕೀಟ ನಿರ್ವಹಣೆ ಸ್ಥಾಪಿಸಲು ಅನುಕೂಲವಾಗಿದೆ ಎಂದರು.
ಡಾ.ಮಹಾಬಲ್ಲೇಶ್ವರ ಹೆಗಡೆ, ಡಾ.ಸಿ.ಪಿ.ಮಲ್ಲಾಪೂರ, ಡಾ.ಎ.ಪಿ.ಬಿರಾದಾರ, ಡಾ.ಸಿ.ಎಂ.ರಫೀ, ಡಾ.ಡಿ.ಎನ್.ಕಾಂಬ್ರೇಕರ, ಡಾ.ರೂಪಾ ಪಾಟೀಲ, ಡಾ.ಎ.ಹೆಚ್.ಬಿರಾದಾರ, ಡಾ.ರವಿಕುಮಾರ ಹೊಸಮನಿ, ಡಾ.ಸಿ.ಎಮ್.ತಿಪ್ಪಣ್ಣವರ, ಡಾ.ಎಸ್.ಟಿ.ಪ್ರಭು, ಡಾ.ರೋಹಿಣಿ ಸುಗಂದಿ ಮುಂತಾದವರು ಭಾಗವಹಿಸಿದ್ದರು. ಡಾ.ಎಸ್.ಎಸ್.ಕರಭಂಟನಾಳ ಕಾರ್ಯಕ್ರಮ ನಿರೂಪಿಸಿದರು. ಡಾ.ಎ.ಪಿ.ಬಿರಾದಾರ ಸ್ವಾಗತಿಸಿದರು. ಡಾ.ಎನ್.ಡಿ.ಸುನಿತಾ ವಂದಿಸಿದರು.