ಧಾರವಾಡ: 55 ವರ್ಷ ಮೀರಿದ, ಅನಾರೋಗ್ಯದಿಂದ ಚಿಕಿತ್ಸೆ ಮೇಲಿರುವ, ಗರ್ಭಿಣಿಯರು, ಅತೀ ಚಿಕ್ಕ ಮಕ್ಕಳಿರುವ ಶಿಕ್ಷಕಿಯರಿಗೆ ಜನಗಣತಿ ಕಾರ್ಯದಿಂದ ವಿನಾಯ್ತಿ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎಸ್‌.ಎಫ್‌. ಸಿದ್ದನಗೌಡರ ಮಾತನಾಡಿ, ಪ್ರೌಢಶಾಲಾ ಶಿಕ್ಷಕರು ಎಸ್ಸೆಸ್ಸೆಲ್ಸಿ ಮತ್ತು ಇತರೆ ತರಗತಿಯ ಮಕ್ಕಳ ವಾರ್ಷಿಕ ಪರೀಕ್ಷೆಯಲ್ಲಿ ನಿರತರಾಗಿದ್ದಾರೆ. ಏ. 9ರಿಂದ ಮೌಲ್ಯಮಾಪನದಲ್ಲೂ ತೊಡಗುತ್ತಾರೆ. 8 ಮತ್ತು 9ನೇ ತರಗತಿಯ ವಾರ್ಷಿಕ ಪರೀಕ್ಷೆಯ ಪ್ರಶ್ನೆವಾರು, ವಿದ್ಯಾರ್ಥಿವಾರು ವಿಶ್ಲೇಷಣೆ ಕಾರ್ಯವೂ ಇದೆ. ಹೀಗಾಗಿ, ಪ್ರೌಢಶಾಲಾ ಸಹಶಿಕ್ಷಕರನ್ನು ಗಣತಿಯಿಂದ ವಿನಾಯಿತಿ ನೀಡಬೇಕಾಗಿತ್ತು. ಒಬ್ಬರ ಮೇಲೆ ಹಲವು ಕಾರ್ಯಗಳನ್ನು ಒಂದೇ ಸಮಯದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ನಗರದಲ್ಲಿಯೇ ಸಾಕಷ್ಟು ಸಂಖ್ಯೆಯ ನೌಕರರಿದ್ದರೂ ದೂರದ ಗ್ರಾಮೀಣದಿಂದ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸುವುದು ಸಹ ಬೇಡ ಎಂದು ಮನವಿ ಮಾಡಿದರು.

ಇದರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ಮಾಡಿದ್ದು, ಪ್ರೌಢಶಾಲಾ ಶಿಕ್ಷಕರಿಗೆ ಅವಮಾನಿಸಿದಂತಾಗಿದೆ ಎಂದು ಇದೇ ಸಂದರ್ಭದಲ್ಲಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಭಜಂತ್ರಿ ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ್ ಲಗಮಣ್ಣವರ, ರಾಜಶೇಖರ ಹೊನ್ನಪ್ಪನವರ, ಭೀಮರಾವ್ ಬಶೆಟ್ಟಿ, ಮಂಜುನಾಥ ಯಡಳ್ಳಿ, ರಮೇಶ ಲಿಂಗದಾಳ, ಮಂಜುನಾಥ ಕುರಕುರಿ, ಪ್ರಮೋದ್ ಹರಿಭಟ್, ಪ್ರಕಾಶ ಬೂತಲ್, ರವಿಕುಮಾರ ದಾಸರ ಇದ್ದರು.