ಸಾರಾಂಶ
ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಮತ್ತು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಇಂತಹ ತರಬೇತಿ ಸಹಕಾರಿಯಾಗುತ್ತದೆ.
ಬಳ್ಳಾರಿ: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಗಣಕೀಕರಣದ ಜ್ಞಾನ ಮತ್ತು ತಂತ್ರಾಂಶ ಕೌಶಲ್ಯವನ್ನು ಪಡೆದುಕೊಂಡರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳ ಬಾಗಿಲು ತೆರೆಯುವುದರಲ್ಲಿ ಸಂಶಯವಿಲ್ಲ ಎಂದು ತರಬೇತಿದಾರರಾದ ಅನಿತಾ ರಾಜ್ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಂದಿ ಫೌಂಡೇಶನ್ ಹಾಗೂ ಮಹೇಂದ್ರ ಪ್ರೈಡ್ ಕ್ಲಾಸ್ ರೂಂ ಇವುಗಳ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಒಂದು ವಾರದ ‘ಸಾಕ್ಷರತಾ ತಂತ್ರಜ್ಞಾನ ಮತ್ತು ಕೌಶಲ್ಯ ತರಬೇತಿ‘ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ತರಬೇತಿ ಸಂದರ್ಶನಗಳನ್ನು ಸುಲಭವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಿಕೊಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನದ ತಿಳಿವಳಿಕೆ ಹೆಚ್ಚಿದಷ್ಟೂ ಸಹಕಾರಿಯಾಗಲಿದೆ ಎಂದರು.ಇನ್ನೋರ್ವ ತರಬೇತಿದಾರ ಸಾಮ್ಯುವೆಲ್ ಜಾನ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಮತ್ತು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಇಂತಹ ತರಬೇತಿ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ್ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶ್ರದ್ಧೆಯೊಂದಿಗೆ ಇಂತಹ ತರಬೇತಿಗಳಿಂದ ಉನ್ನತ ಮಟ್ಟವನ್ನು ತಲುಪಲು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.ಪ್ರಾಧ್ಯಾಪಕರಾದ ಡಾ. ಮೋನಿಕಾ ರಂಜನ್. ಡಾ. ಮಂಜುನಾಥ, ದೊಡ್ಡ ಬಸವರಾಜ ಇದ್ದರು.