ಸಾರಾಂಶ
ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶದ ಎಲ್ಲ ವಿದ್ಯಾವಂತ ಯುವಕರಿಗೆ ಆರ್ಥಿಕ ಶಕ್ತಿ ನೀಡಲು ವರ್ಷಕ್ಕೆ ₹ 1 ಲಕ್ಷ ಶಿಷ್ಯ ವೇತನ ನೀಡಲಿದೆ.
ನವಲಗುಂದ:
ತಾಲೂಕಿನ ಶಿರಗುಪ್ಪಿ, ಬಂಡಿವಾಡ, ಮಂಟೂರ ಹಾಗೂ ನಾಗರಹಳ್ಳಿ ಗ್ರಾಮಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಶಾಸಕ ಎನ್.ಎಚ್. ಕೋನರಡ್ಡಿ ಭರ್ಜರಿ ಪ್ರಚಾರ ನಡೆಸಿದರು.ಈ ವೇಳೆ ಮಾತನಾಡಿದ ಕೋನರಡ್ಡಿ, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶದ ಎಲ್ಲ ವಿದ್ಯಾವಂತ ಯುವಕರಿಗೆ ಆರ್ಥಿಕ ಶಕ್ತಿ ನೀಡಲು ವರ್ಷಕ್ಕೆ ₹ 1 ಲಕ್ಷ ಶಿಷ್ಯ ವೇತನ ನೀಡಲಿದೆ. ಪಂಚ ಗ್ಯಾರಂಟಿಗಳಾದ ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯದ ಜತೆ ಯುವ ನ್ಯಾಯ ಒದಗಿಸಲಿದೆ. ಉದ್ಯೋಗ ಖಾತ್ರಿ ಸಲುವಾಗಿ ಅವರ ಹಕ್ಕಿಗಾಗಿ 30 ಲಕ್ಷ ಖಾಲಿ ಇರುವ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ಮಾಡುವ ಭರವಸೆ ಘೋಷಣೆ ಮಾಡಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ 5 ಗ್ಯಾರಂಟಿ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಿರ್ಧಾರ ತೆಗೆದುಕೊಂಡಂತೆ ದೇಶದಲ್ಲೂ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ಕರ್ನಾಟಕದಲ್ಲಿ 18-20 ಸ್ಥಾನ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಶಿವಾನಂದ ಭೂಮಣ್ಣವರ, ನಂದಿನಿ ಹಾದಿಮನಿ, ಪ್ರಕಾಶಗೌಡ ಹನಮರಡ್ಡಿ, ಶಿವಣ್ಣ ಹುಬ್ಬಳ್ಳಿ, ಎಂ.ಎಸ್. ರೋಣದ, ಗುರುನಾಥ ಹಳ್ಳೂರ, ತಾಜುದ್ದೀನ ಮುಲ್ಲಾನವರ, ಪ್ರಕಾಶ ಹುಲಗೂರ, ಗುರಣ್ಣ ದೇಸಾಯಿ, ಆರ್.ಎಫ್. ಕವಳಿಕಾಯಿ, ರಾಜೇಶ ಆಲೂರ, ಚಿದಾನಂದ ಯಡವಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.