ಸಾರಾಂಶ
ಧಾರವಾಡ: ಇಲ್ಲಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮಲಪ್ರಭಾ ಪ್ರಾಜೆಕ್ಟ್ ಜೋನ್ ಮುಖ್ಯ ಅಭಿಯಂತರ ಅಶೋಕ ವಾಸನದ ಎಂಬುವರ ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಇರುವ 8 ಸ್ಥಳಗಳಲ್ಲಿ ಮಂಗಳವಾರ ಏಕಕಾಲಕ್ಕೆ ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು ₹6.11 ಕೋಟಿ ಮೊತ್ತದ ಆಸ್ತಿಯನ್ನು ಬಯಲಿಗೆ ಎಳೆದಿದ್ದಾರೆ.
ಅಧಿಕಾರಿ ಅಶೋಕ ಅವರ ಧಾರವಾಡದ ಕೆವಿಜಿ ಬ್ಯಾಂಕ್ ಬಳಿ ಇರುವ ಮನೆ ಹಾಗೂ ಲೋಕಾಯುಕ್ತ ಕಚೇರಿ ಪಕ್ಕದಲ್ಲಿಯೇ ಇರುವ ಮಲಪ್ರಭಾ ಮುಖ್ಯ ಎಂಜಿನಿಯರ್ ಕಚೇರಿ ಸೇರಿದಂತೆ ಬೆಳಗಾವಿ, ಬಾಗಲಕೋಟ, ಹಾಸನ ಸೇರಿ ವಿವಿಧ 8 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿರುವ ತಂಡಗಳು ಶೋಧ ನಡೆಸಿವೆ. ಧಾರವಾಡದಲ್ಲಿ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ಅವರು ನೇತೃತ್ವ ವಹಿಸಿದ್ದರು.ಇಷ್ಟೊಂದು ಆಸ್ತಿ ಪತ್ತೆ: ಎಂಜಿನಿಯರ್ ಅಶೋಕ ಹೆಸರಿನಲ್ಲಿ ಅಥವಾ ಅವರಿಗೆ ಸಂಬಂಧಿಸಿದ 7 ನಿವೇಶನಗಳು, ಮೂರು ವಾಸದ ಮನೆಗಳು, 19.03 ಎಕರೆ ಕೃಷಿ ಭೂಮಿ ಸೇರಿ ₹3.15 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೆಯೇ, ₹1.61 ಲಕ್ಷ ನಗದು, ₹1.74 ಕೋಟಿ ಬ್ಯಾಂಕ್ ಬ್ಯಾಲೆನ್ಸ್, ₹96.67 ಲಕ್ಷ ಮೌಲ್ಯದ ಬೆಲೆ ಬಾಳುವ ಚಿನ್ನಾಭರಣಗಳು, ₹13.40 ಲಕ್ಷ ಬೆಲೆಬಾಳುವ ವಾಹನಗಳು, ₹10 ಲಕ್ಷ ಬೆಲೆಬಾಳುವ ಇತರೆ ವಸ್ತುಗಳು ಎಲ್ಲ ಸೇರಿ ಚರಾಸ್ತಿ ₹2.95 ಕೋಟಿ ಸೇರಿದಂತೆ ಒಟ್ಟು ₹6.11 ಕೋಟಿ ಮೊತ್ತದ ಆಸ್ತಿ ಪತ್ತೆಯಾಗಿದ್ದು, ಈ ಕುರಿತು ಧಾರವಾಡ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.