ಜಾಗತಿಕ ಮಟ್ಟದ ಅವಕಾಶಗಳಿಗೆ ಆಂಗ್ಲ ಭಾಷೆ ಸಹಕಾರಿ

| Published : May 28 2024, 01:19 AM IST

ಸಾರಾಂಶ

ವಿಶ್ವದ ವಿವಿಧೆಡೆಗಳಲ್ಲಿ ಸೃಷ್ಟಿಯಾಗುವ ಜ್ಞಾನ ನಾವೂ ಪಡೆದುಕೊಳ್ಳಲು, ಅದರ ಪ್ರಯೋಜನ ಪಡೆದುಕೊಳ್ಳಲು ಇಂಗ್ಲಿಷ್ ಭಾಷೆ ನಮಗೆ ಸಹಾಯ

ಕನ್ನಡಪ್ರಭ ವಾರ್ತೆ ಹುಮನಾಬಾದ

ಸಮರ್ಪಕ ಆಂಗ್ಲಭಾಷಾ ಜ್ಞಾನ ಇಂದಿನ ಅಗತ್ಯಗಳಲ್ಲೊಂದಾಗಿದೆ. ಚೆನ್ನಾಗಿ ಕಲಿತರೆ ಜಾಗತಿಕ ಮಟ್ಟದಲ್ಲೂ ಹಲವು ಅವಕಾಶ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಬಸವತೀರ್ಥ ವಿದ್ಯಾಪೀಠ ಹಳ್ಳಿಖೇಡ (ಬಿ) ಆಡಳಿತಾಧಿಕಾರಿ ಗುಂಡಯ್ಯಾ ತೀರ್ಥ ಹೇಳಿದರು.

ಪಟ್ಟಣದ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ವಿವಿಧ ಶಾಲೆ ಶಿಕ್ಷಕರಿಗಾಗಿ ಕ್ರಿಯೇಟಿವ್ ಟೀಚಿಂಗ್ ಸೆಂಟರ್ ಬೆಂಗಳೂರು ಇವರು ನಡೆಸಿದ ಸ್ಪೋಕನ್ ಇಂಗ್ಲಿಷ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಿಶ್ವದ ವಿವಿಧೆಡೆಗಳಲ್ಲಿ ಸೃಷ್ಟಿಯಾಗುವ ಜ್ಞಾನ ನಾವೂ ಪಡೆದುಕೊಳ್ಳಲು, ಅದರ ಪ್ರಯೋಜನ ಪಡೆದುಕೊಳ್ಳಲು ಇಂಗ್ಲಿಷ್ ಭಾಷೆ ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಆಂಗ್ಲ ಭಾಷೆ ಶಿಕ್ಷಣ ತಜ್ಞ ಶಿವಲಿಂಗ ಚಿಕ್ಕಮಠ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಸಮರ್ಥವಾಗಿ ಎದುರಿಸಬೇಕಾದರೆ ಮಾತೃ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆಯೂ ಅವಶ್ಯಕವಾಗಿದೆ. ಹಿಂದಿನ ದಿನಗಳಲ್ಲಿ ಮಾತೃ ಭಾಷೆ ಮೂಲಕ ನಮ್ಮತನ, ನಮ್ಮ ಗುಣ ರೂಪಿಸಿಕೊಳ್ಳುತ್ತಿದ್ದೆವು. ಪ್ರತಿ ಕೆಲಸವು ಮಾತೃ ಭಾಷೆಯಲ್ಲೇ ನಡೆಯುತ್ತಿತ್ತು. ಆದರೆ, ಈಗಿನ ಒತ್ತಡದ ಜೀವನದಲ್ಲಿ ಒಬ್ಬರು ಮತ್ತೊಬ್ಬರನ್ನು ಸೋಲಿಸುವ ತವಕದಲ್ಲಿ ತಮಗೆ ತಿಳಿಯದಂತೆಯೇ ಅನಿವಾರ್ಯವಾಗಿ ಇಂಗ್ಲಿಷ್ ದಾಸರಾಗಿದ್ದಾರೆ.

ಪ್ರತಿಯೊಂದು ದೇಶ ಮತ್ತು ವಿಷಯ ಅರಿಯಲು, ದೇಶ ವಿದೇಶಗಳ ಮಾಹಿತಿ ಕಲೆ ಹಾಕಲು, ಜ್ಞಾನ ವೃದ್ಧಿಗೆ ಇಂಗ್ಲಿಷ್ ಅನಿವಾರ್ಯ. ಪ್ರಸ್ತುತ ಜಾಗತೀಕರಣದಲ್ಲಿ ಇಂಗ್ಲಿಷ್ ಪ್ರತಿಯೊಬ್ಬರ ಏಳಿಗೆಗೆ ಮಾನದಂಡವಾಗಿದೆ ಎಂದು ತಿಳಿಸಿದರು.

ಸಂಸ್ಥೆ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಇಂಗ್ಲಿಷ್ ಜೊತೆಗೆ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ಇಂಗ್ಲಿಷ್ ವ್ಯವಹಾರಿಕ ಹಿತದೃಷ್ಟಿಯಿಂದ ಅಗತ್ಯ. ಅದೇ ರೀತಿ ಸಂವಹನ ಕೌಶಲ್ಯವು ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಎಂದು ಹೇಳಿದರು.

ನ್ಯಾಯವಾದಿ ಪ್ರಭಾಕರ ನಾಗರಾಳೆ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕರಾದ ವರ್ಷಾ ಜಗನ್ನಾಥ, ಶಿವಲೀಲಾ ಸ್ಡಾಮಿ, ರೇಷ್ಮಾ ಧನರಾಜ, ದಿವ್ಯಾರಾಣಿ ರಮೇಶ, ಭಾಗ್ಯಶ್ರೀ, ಸುಮಿತ್ರಾ ಶಂಕರ, ವೀರಶೆಟ್ಟಿ ಜೀರಗಿ, ಜ್ಞಾನವಂತರಾವ, ವಿದ್ಯಾ ತಿಬಶೆಟ್ಟಿ, ಪ್ರೇಮಾ ಅಂಬಣ್ಣ , ಸತಿದೇವಿ, ಪಾರ್ವತಿ ಮೈಲಾರೆ, ಇಂದುಮತಿ ಮಠ, ವಿದ್ಯಾವತಿ ಯರನಾಳೆ, ನಿಜಲಿಂಗಪ್ಪ ಜಕ್ಕಾ, ಮಲ್ಲೀಕಾರ್ಜುನ ಭಂಗೂರೆ, ದಿಲೀಪ ಗಾಯಕವಾಡ ರಾಮರಾವ ಕುಲ್ಕರ್ಣಿ ಸೇರಿದಂತೆ ಅನೇಕರಿದ್ದರು.